ಬೆಂಗಳೂರು: "ನನಗೆ ಬದುಕಲು ಇಷ್ಟವಿಲ್ಲ!" ಹೀಗೊಂದು ಡೆತ್ ನೊಟ್ ಬರೆದಿಟ್ಟು ಎರಡೂವರೆ ವರ್ಷದ ಮುದ್ದಾದ ಮಗುವನ್ನು ನೇಣು ಹಾಕಿದ ತಾಯಿಯೊಬ್ಬಳು ತಾನೂ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಬೆಂಗಳೂರು ಚಂದ್ರಾ ಲೇಔಟ್, ಕಲ್ಯಾಣ ನಗರದಲ್ಲಿ ನಡೆದಿದೆ.
ಶನಿವಾರ ಸಂಜೆ ಈ ಘಟನೆ ಬೆಳಕು ಕಂಡಿದ್ದು ಮೃತರನ್ನು ಪ್ರತಿಮಾ ಮಂಗಳೂರ್ಕರ್ (28) ಹಾಗೂ ಪುತ್ರ ಸಾತ್ವಿಕ್ ಎಂದು ಗುರುತಿಸಲಾಗಿದೆ. ಅಬಕಾರಿ ಇಲಾಖೆಯಲ್ಲಿ ಪ್ರಥಮ ದರ್ಜೆ ಗುಮಾಸ್ತನಾಗಿದ್ದ ಸಂತೋಷ್ ಶೆಟ್ಟಿ ಎಂಬುವವರ ಪತ್ನಿ ಹಾಗೂ ಪುತ್ರರಾಗಿದ್ದ ಇವರು ನಾಗರಬಾವಿ ಸಮೀಪದ ಕಲ್ಯಾಣ ನಗರದ 14ನೆ ಬಿ ಮುಖ್ಯ ರಸ್ತೆ ನಿವಾಸಿಗಳಾಗಿದ್ದರು.
ಮೂಲತಃ ಕಾರವಾರದ ಈ ಕುಟುಂಬ ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ನೆಕೆಸಿತ್ತು.
ಶನಿವಾರ ರಾತ್ರಿ 9.45ರ ಸುಮಾರಿನಲ್ಲಿ ಪ್ರತಿಮಾ "ನನಗೆ ಬದುಕಲು ಇಷ್ಟವಿಲ್ಲ, ನಾನು ಸಾಯುತ್ತಿದ್ದೇನೆ." ಎಂದು ಡೆತ್ ನೋಟ್ ಬರೆದಿಟ್ಟು ಬೆಡ್ ರೂಮಿನಲ್ಲಿ ತನ್ನ ಮಗನಿಗೆ ನೇಣು ಹಾಕಿ ಕೊಂದುದಲ್ಲದೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ವೇಳೆ ಕೆಲಸಕ್ಕೆ ತೆರಳಿದ್ದ ಪತಿ ಸಂತೋಷ್ ರಾತ್ರಿ ಮನೆಗೆ ಆಗಮಿಸಿದ ನಂತರ ಇಬ್ಬರೂ ಸಾವನ್ನಪ್ಪಿರುವುದನ್ನು ಕಂಡಿದ್ದಾನೆ.ತಕ್ಷಣ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಚಂದ್ರಾ ಲೇ ಔಟ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.