ಬೆಂಗಳೂರು: ನಗರದಲ್ಲಿ ಮಳೆ ನೀರು ಕೊಯ್ಲು ಅವಶ್ಯವಾಗಿದ್ದರೂ, ಇಲ್ಲಿಯವರೆಗೆ ಅದನ್ನು ಅಳವಡಿಸದ ಮನೆಗಳಿಗೆ ಕಾವೇರಿ ನೀರಿನ ಸರಬರಾಜಿಗೆ ಮಿತಿ ಹೇರಲಾಗುವುದು ಎಂದು ಜಲಮಂಡಳಿ ಎಚ್ಚರಿಕೆ ನೀಡಿದೆ.
ವಿಶ್ವ ಜಲದಿನದ ಅಂಗವಾಗಿ ಹೊಸ ನಿಯಮಗಳ ಅಧಿಸೂಚನೆ ಹೊರಡಿಸಿರುವ ಜಲಮಂಡಳಿ, ನಗರದಲ್ಲಿ ಮಳೆನೀರು ಕೊಯ್ಲು ಯೋಜನೆಯ ಯಶಸ್ವಿ ಜಾರಿಗೆ ಮುಂದಾಗಿದೆ. ಮಳೆನೀರು ಕೊಯ್ಲು ಅಳವಡಿಸಿಕೊಂಡಿರುವ ಕಟ್ಟಡಗಳ ಸ್ಥಿತಿಗತಿಯ ಬಗ್ಗೆ ಆಯಾ ಪ್ರದೇಶದ ನಿವಾಸಿಗಳ ಕಲ್ಯಾಣ ಸಂಘಗಳಿಂದ ಮಾಹಿತಿ ಪಡೆಯಲಾಗುವುದು. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ಅಧಿಸೂಚನೆ ತಿಳಿಸಿದೆ.
ನಿವಾಸಿಗಳ ಕಲ್ಯಾಣ ಸಂಘ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ನಗರದಲ್ಲಿರುವ ಎಲ್ಲ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳನ್ನು ತಪಾಸಣೆ ನಡೆಸಿ, ಅಪಾರ್ಟ್ ಮೆಂಟ್ಗಳಲ್ಲಿ ನಿಯಮಾನುಸಾರ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲದಿರುವುದು ಕಂಡುಬಂದಲ್ಲಿ, ವಿದ್ಯುತ್ ಸರಬರಾಜು ಇಲಾಖೆಗೆ ದೂರು ನೀಡಲಾಗುವುದು ಹಾಗೂ ನೀರಿನ ಸರಬರಾಜು ಕಡಿಮೆ ಮಾಡಲಾಗುವುದು ಎಂದು ಅಧಿಸೂಚನೆ ಎಚ್ಚರಿಕೆ ನೀಡಿದೆ.
Advertisement