ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಹಾರಾಷ್ಟ್ರ ಸರ್ಕಾರ ಒಪ್ಪಂದ ಮಾಡಿಕೊಂಡಂತೆ ಕೃಷ್ಣಾ ನದಿಗೆ ನೀರು ಹರಿಸಲು ನಿರಾಕರಿಸಿದೆ ಎಂದು ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಶನಿವಾರ ಆರೋಪಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ರಾಜ್ಯದ ಗಡಿ ಭಾಗಗಳಿಗೆ ಮಹಾರಾಷ್ಟ್ರದಿಂದ ನೀರು ಪಡೆಯಲು ನಾವು ಹಲವು ಪ್ರಯತ್ನಗಳನ್ನು ನಡೆಸಿದ ನಂತರ ಮಹಾ ಸರ್ಕಾರ ನೀರು ಹರಿಸಲು ಒಪ್ಪಿಕೊಂಡಿತ್ತು. ಆದರೆ ಈಗ ನೀರು ಬಿಡಲು ಸಿದ್ಧವಿಲ್ಲ ಎಂದಿದ್ದಾರೆ.
ಮಹಾರಾಷ್ಟ್ರ ಸರ್ಕಾರ ನೀರಿನ ಬದಲಾಗಿ ಹಣ ಬೇಡ. ನೀರೇ ನೀಡಿ ಎಂಬ ಬೇಡಿಕೆ ಮುಂದಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದ ಸಚಿವರು, ನಮ್ಮ ಬಳಿ ಕೊನೆ ಹಂತದ ನೀರು ಸಂಗ್ರಹವಿದೆ ಎಂದು ಹೇಳಿದ್ದಾರೆ.
ಜನರಿಗೆ ಕುಡಿಯುವ ನೀರಿನ ತೊಂದರೆಯಾಗುತ್ತಿದ್ದು, ಹಿಡಕಲ್ ಜಲಾಶಯದಲ್ಲಿ ಲಭ್ಯವಿರುವ 1 ಟಿಎಂಸಿ ನೀರನ್ನು ಕೂಡ ಅಥಣಿ ಮತ್ತು ಕಾಗವಾಡ ಪ್ರದೇಶಗಳಿಗೆ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಡಿಕೆಶಿ ತಿಳಿಸಿದ್ದಾರೆ.