ದಾವಣಗೆರೆ: ಪ್ರೀತಿಸುತ್ತಿದ್ದ ಯುವತಿ ಜತೆ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರೇಯಸಿಯ ತಂದೆ ಮೇಲೆ ಯೋಧನೊಬ್ಬ ಗುಂಡು ಹಾರಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಹೊನ್ನಾಳಿ ತಾಲೂಕಿನ ಬಿದರಘಟ್ಟೆ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಯೋಧ ದೇವರಾಜ್ (27) ತಮ್ಮ ಪ್ರೇಯಸಿಯ ತಂದೆ ಪ್ರಕಾಶ್ ಮೇಲೆ ಗುಂಡು ಹಾರಿಸಿದ್ದಾನೆ.ಗುಂಡೇಟಿನಿಂದ ಗಾಯಗೊಂಡ ಪ್ರಕಾಶ್ ಅವರನ್ನು ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ
ಪ್ರಕಾಶ್ ಅವರ ಮಗಳನ್ನು ಯೋಧ ದೇವರಾಜ್ ಪ್ರೀತಿಸುತ್ತಿದ್ದ. ಶುಕ್ರವಾರ ರಜೆ ಮೇಲೆ ಊರಿಗೆ ಬಂದಿದ್ದದೇವರಾಜ್ ತಮ್ಮಿಬ್ಬರ ಪ್ರೀತಿ ವಿಷಯವನ್ನು ಯುವತಿಯ ತಂದೆ ಪ್ರಕಾಶ್ ಬಳಿ ಹೇಳಿಕೊಂಡಿದ್ದಾನೆ. ಆದರೆ ಪ್ರಕಾಶ್ ತಾವು ಈ ಪ್ರಸ್ತಾವನೆಯನ್ನು ಒಪ್ಪಲಿಲ್ಲ. ಆಗ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಮಾತಿನ ಭರದಲ್ಲಿ ಯೋಧ ದೇವರಾಜ್ ತನ್ನ ಬಳಿ ಇದ್ದ ರೈಫಲ್ ನಿಂದ ಪ್ರಕಾಶ್ ಅವರ ಮೇಲೆ ಗುಂಡು ಹಾರಿಸಿದ್ದಾನೆ.ಗುಂಡೇಟು ತಿಂದ ಪ್ರಕಾಶ್ ಅವರನ್ನು ತಕ್ಷಣ ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.
ಘಟನೆ ಸಂಬಂಧ ಮಾಹಿತಿ ಪಡೆದ ಪೋಲೀಸರು ಸ್ಥಳಕ್ಕಾಗಮಿಸಿ ಯೋಧನನ್ನು ಬಂಧಿಸಿದ್ದಾರೆ.ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.