ಚಿಕ್ಕಮಗಳೂರು: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಧ್ವಜದ ಜೊತೆಗೆ ಕನ್ನಡ ಬಾವುಟವನ್ನು ಕೂಡ ಹಾರಿಸುವ ಯಾವುದೇ ಸಂಪ್ರದಾಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ ಟಿ ರವಿ ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.
ಮೊನ್ನೆ ಶುಕ್ರವಾರ ಸಚಿವ ಸಿ ಟಿ ರವಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ನಮ್ಮ ದೇಶದ ಸಂವಿಧಾನದಲ್ಲಿ ಒಂದು ರಾಷ್ಟ್ರ, ಒಂದು ಧ್ವಜ ಎಂಬ ತತ್ವವಿದೆ. ಕನ್ನಡಿಗರ ಸಂಸ್ಕೃತಿಯ ಗುರುತಾಗಿ ಕನ್ನಡ ಬಾವುಟವಿದೆ. ಕರ್ನಾಟಕ ಏಕೀಕರಣದ ಇತಿಹಾಸದಲ್ಲಿ ರಾಜ್ಯದ ಧ್ವಜವನ್ನು ಹಾರಿಸಿದ ಉದಾಹರಣೆಯೇ ಇಲ್ಲ. ಆದರೆ ಕರ್ನಾಟಕ ಜನತೆ ಅದನ್ನು ತಮ್ಮ ಅಸ್ತಿತ್ವದ ಗುರುತಾಗಿ ಸ್ವೀಕರಿಸಿದ್ದಾರೆ ಎಂದು ಹೇಳಿದ್ದರು.
ಅವರು ಈ ಮಾತುಗಳನ್ನು ಹೇಳುತ್ತಿದ್ದಂತೆ ಅದು ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದರು. ಸಚಿವರ ಈ ಹೇಳಿಕೆ ಎಷ್ಟು ಗಂಭೀರವಾಯಿತೆಂದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ಹೇಳಿಕೆಯ ಪ್ರತಿಯನ್ನು ನೀಡುವಂತೆ ಹೇಳಿದೆ ಎನ್ನಲಾಗಿದೆ.
ಕನ್ನಡ ನೆಲ,ಜಲ, ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಗೌರವ ಇಲ್ಲದಿರುವುದು ಸಚಿವರ ಹೇಳಿಕೆಯಲ್ಲಿ ಕಾಣುತ್ತದೆ ಎಂದು ಚಿಕ್ಕಮಗಳೂರಿನಲ್ಲಿ ನಿನ್ನೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
Advertisement