ಬೆಂಗಳೂರು: ಅಯೋಧ್ಯಾ ಭೂಮಿ ವಿವಾದ ಸಂಬಂಧ ಸರ್ವೋಚ್ಛ ನ್ಯಾಯಾಲಯ ಪ್ರಕಟಿಸಿರುವ ಐತಿಹಾಸಿಕ ತೀರ್ಪನ್ನು ಸ್ವಾಗತಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ತೀರ್ಪು ಹಿನ್ನೆಲೆಯಲ್ಲಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಅವರು, ನ್ಯಾಯಾಲಯ ನೀಡಿರುವ ತೀರ್ಪು ಯಾರೊಬ್ಬರ ಸೋಲು ಅಲ್ಲ, ಇದು ಗೆಲುವೂ ಅಲ್ಲ. ಸೋಲು-ಗೆಲುವು ಎಂದು ಯಾರೂ ಭಾವಿಸಬಾರದು. ಯಾರೂ ಉದ್ವೇಗಕ್ಕೆ ಒಳಗಾಗಬಾರದು, ವಿಜೃಂಭಿಸಬಾರದು. ನಾಡಿನಲ್ಲಿ ಶಾಂತಿ, ಸಾಮರಸ್ಯ ಸೌಹಾರ್ದತೆ ಕಾಪಾಡಬೇಕು ಎಂದು ಕರೆ ನೀಡಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪನ್ನು ಗೌರವಿಸೋಣ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಈ ಸಂಬಂಧ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್, ಎಲ್ಲರು ಶಾಂತಿ, ಸೌಹಾರ್ದತೆ ಕಾಪಾಡಬೇಕು. ಅಯೋಧ್ಯೆ ತೀರ್ಪು ವಿಚಾರ ಬಗ್ಗೆ ತಾವು ಮಾತನಾಡುವುದಿಲ್ಲ ಎಂದರು.
ನ್ಯಾಯಪೀಠ ಎಲ್ಲರಿಗೂ ಒಪ್ಪಿತ ಸರ್ವ ಸಮ್ಮತ ತೀರ್ಪುನ್ನು ಪ್ರಕಟಿಸಿದೆ. ಇದೊಂದು ಐತಿಹಾಸಿಕ ತೀರ್ಪು ಎಲ್ಲ ಧರ್ಮದವರು ಸಹ ತೀರ್ಪು ಒಪ್ಪಿಕೊಂಡಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ
ತೀರ್ಪನ್ನು ಎಲ್ಲರೂ ಸಮಚಿತ್ತದಿಂದ ಸ್ವೀಕರಿಸಬೇಕು. ನನಗೆ ವೈಯಕ್ತಿಕವಾಗಿಯೂ ಈ ತೀರ್ಪು ಸಮ್ಮತವಾಗಿದೆ. ಪರಸ್ಪರ ಸಹಕಾರದಲ್ಲಿ ಮಂದಿರ, ಮಸೀದಿ ನಿರ್ಮಾಣವಾಗಲಿ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ
Advertisement