ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಕ್ರಿಕೆಟ್ ಪಂದ್ಯಾವಳಿಯ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಅಂತರಾಷ್ಟ್ರೀಯ ಬುಕ್ಕಿಯನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ಪೊಲೀಸರು ದೆಹಲಿಯಲ್ಲಿ ಬಂಧನಕ್ಕೊಳಪಡಿಸಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಬೆಳಕಿಗೆ ಬರುತ್ತಿದ್ದೆತೆ ಬುಕ್ಕಿ ಸಯ್ಯಂ ತಲೆಮರೆಸಿಕೊಂಡಿದ್ದಲ ಬಳಿಕ ಆರೋಪಿಗಾಗಿ ಲುಕುಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು. ಆರೋಪಿ ಹರಿಯಾಣ ಮೂಲದವನಾಗಿದ್ದು, ಪ್ರಕರಣ ಬಳಿಕ ವೆಸ್ಟ್ ಇಂಡೀಸ್'ಗೆ ಪರಾರಿಯಾಗಿದ್ದ. ಪ್ರಕರಣ ಬಳಿಕ ಸಿಸಿಬಿ ಅಧಿಕಾರಿಗಳು ಹರಿಯಾಣದಲ್ಲಿರುವ ಆತನ ಕುಟುಂಬದವರನ್ನು ಪತ್ತೆ ಮಾಡಿ, ಅವರ ಮೂಲಕ ಆರೋಪಿಯನ್ನು ಕರೆತರುವ ಯತ್ನ ನಡೆಸಿದ್ದರು. ಇದರಂತೆ ಆರೋಪಿ ಶನಿವಾರ ರಾಜಧಾನಿ ದೆಹಲಿಗೆ ಆಗಮಿಸುತ್ತಿದ್ದಂತೆಯೇ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಯ್ಯಂ ಹರಿಯಾಣ ಮೂಲದ ಬುಕ್ಕಿಯಾಗಿದ್ದು, ಈತನಿಗೆ ಅಂತರಾಷ್ಟ್ರೀಯ ಮಟ್ಟಕ ಕ್ರಿಕೆಟ್ ಆಟಗಾರರು ಪರಿಚಯವಿದ್ದಾರೆಂದು ಹೇಳಲಾಗುತ್ತಿದೆ.
ಬಂಧಿತ ಆರೋಪಿ ಸಯ್ಯಮ್ ಬಳ್ಳಾರಿ ಟಸ್ಕರ್ಸ್ನ ಬೌಲರ್ ಭವೇಶ್ ಗುಲೇಚಾ ಅವರನ್ನು ತನ್ನ ಗೆಳೆಯ ಭವೇಶ್ ಭಫಫ್ನ ಮೂಲಕ ಬುಕ್ ಮಾಡಿಕೊಳ್ಳಲು ಯತ್ನಿಸಿದ್ದ. ಗುಲೇಚ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಭಫ್ನನನ್ನು ಬಂಧನಕ್ಕೊಳಪಡಿಸಿದ್ದಾರೆ. ವಿಚಾರಣೆ ವೇಳೆ ಭಫ್ನ ಸಯ್ಯಂ ಹೆಸರನ್ನು ಬಾಯ್ಬಿಟ್ಟಿದ್ದ.
ಬಂಧಿತ ಸಯ್ಯಂ ಗುಲೇಚ ಅವರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಭೇಟಿ ಮಾಡಿದ್ದ. ಈ ವೇಳೆ ಪ್ರತಿ ಓವರ್'ಗೆ 10ಕ್ಕಿಂತಲೂ ಹೆಚ್ಚು ರನ್ ನೀಡಿದರೆ, ದೊಡ್ಡ ಮೊತ್ತದ ಹಣ ನೀಡುವುದಾಗಿ ತಿಳಿಸಿದ್ದ. ಆದರೆ, ಗುಲೇಚಾ ಇದನ್ನು ತಿರಸ್ಕರಿಸಿದ್ದರು ಎಂದು ತಿಳಿದುಬಂದಿದೆ.
Advertisement