ತನ್ವೀರ್ ಸೇಠ್ ಮೇಲೆ ಮಾರಣಾಂತಿಕ‌ ಹಲ್ಲೆ ಪ್ರಕರಣ: ಮತ್ತೆ ಐವರ ಬಂಧನ

ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ‌ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್ಐಟಿ) ಮತ್ತೆ ಐವರನ್ನು ಬಂಧಿಸಿದೆ.
ತನ್ವೀರ್ ಸೇಠ್
ತನ್ವೀರ್ ಸೇಠ್

ಮೈಸೂರು: ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ‌ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್ಐಟಿ) ಮತ್ತೆ ಐವರನ್ನು ಬಂಧಿಸಿದೆ.

ಅಕ್ರಮ್, ಅಬೀದ್ ಪಾಷಾ, ನೂರ್ ಖಾನ್, ಮುಜೀಬ್ ಹಾಗೂ ಮುಜ್ಹಾಮಿಲ್ ಬಂಧಿತ ಆರೋಪಿಗಳು.

ಕಳೆದ ನ. 17 ರಂದು ತಡರಾತ್ರಿ ಶಾಸಕರ ಮೇಲೆ ಹಲ್ಲೆ ನಡೆಸಿ ಬನ್ನಿಮಂಟಪ ಸ್ಥಳದಿಂದ ಪರಾರಿಯಾಗಲು ಯತ್ನಿಸಿದಾಗ ಘೌಸಿಯಾನಗರದ ಫರ್ಹಾನ್ ಪಾಷಾ ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ಈಗ ಮತ್ತೆ ಐವರನ್ನು ಪೊಲೀಸರು ಬಂಧಿಸಿದ್ದು, ಇದರೊಂದಿಗೆ ಪ್ರಕರಣದಲ್ಲಿ ಬಂಧನಕ್ಕೊಳಗಾದವರ ಸಂಖ್ಯೆ ಆರಕ್ಕೇರಿದೆ.

ಬಂಧನಕ್ಕೊಳಗಾದ ಎಲ್ಲಾ ಐವರನ್ನು ಪೊಲೀಸ್ ವಿಚಾರಣೆಯ ನಂತರ ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಆದರೆ, ಫರ್ಹಾನ್ ಪಾಷಾ ಇನ್ನೂ ಪೊಲೀಸ್ ವಶದಲ್ಲಿದ್ದು, ಮಾರಣಾಂತಿಕ ಹಲ್ಲೆಯ ಉದ್ದೇಶ ಮತ್ತು ಪ್ರಕರಣದಲ್ಲಿ ಇತರರ ಭಾಗಿಯಾಗಿರುವ ಬಗ್ಗೆ ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ತಿಳಿಸಿದ್ದಾರೆ.

ಫರ್ಹಾನ್ ಪಾಷಾ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಬಗ್ಗೆ ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಬನ್ನಿಮಂಟಪ್ ಪೆರೇಡ್ ಮೈದಾನದಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲು ಅನುಮತಿ ಕೋರಿ ತನ್ವೀರ್ ಸೇಠ್‌ ಇತ್ತೀಚೆಗೆ ಮುಡಾ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದಾಗ ಫರ್ಹಾನ್ ಹಾಜರಿದ್ದು, ತನ್ವೀರ್ ಅವರ ಚಲನವಲನಗಳನ್ನು ನಿರಂತರವಾಗಿ ಗಮನಿಸುತ್ತಿದ್ದನು.

ಶ್ರೀರಂಗಪಟ್ಟಣ ಪೊಲೀಸರು ಟಿಪ್ಪು ಸ್ಮಾರಕದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಾಗ ಅವರನ್ನು ಕೊಲೆ ಮಾಡಲು ನಿರಂತರವಾಗಿ ಪ್ರಯತ್ನಗಳನ್ನು ಮಾಡಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣದ ತನಿಖೆಗೆ ಸಂಬಂಧಿಸಿದ ಮತ್ತೊಂದು ಬೆಳವಣಿಗೆಯಲ್ಲಿ, ಕೊಲೆಗಡುಕ ಹಲ್ಲೆಯ ಹಿಂದಿನ ಸಂಪೂರ್ಣ ಉದ್ದೇಶವನ್ನು ತಿಳಿಯಲು ಡಿಸಿಪಿ ಎಂ.ಮುತುರಾಜ್ ನೇತೃತ್ವದ ಎಸ್‌ಐಟಿ ತಂಡವು ಕೇಂದ್ರ ಗುಪ್ತಚರ ದಳದ ಸಹಾಯ ಕೋರಿದೆ ಎನ್ನಲಾಗಿದೆ. ಅಲ್ಲದೆ, ಎಸ್‌ಪಿ ನೇತೃತ್ವದ ಉನ್ನತ ಗುಪ್ತಚರ ಅಧಿಕಾರಿಗಳ ತಂಡವು ಪ್ರಕರಣದ ತನಿಖೆಯಲ್ಲಿ ವಿಧಿವಿಜ್ಞಾನ, ವೈಜ್ಞಾನಿಕ ಮತ್ತು ತಾಂತ್ರಿಕ ನೆರವು ಕೋರಲಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com