ಬಳ್ಳಾರಿ: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಪ್ರತ್ಯೇಕ ವಿಜಯನಗರ ಜಿಲ್ಲೆ ರಚಿಸಲು ತೀರ್ಮಾನಿಸಿರುವ ರಾಜ್ಯ ಸರಕಾರದ ವಿರುದ್ಧ ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಳ್ಳಾರಿ ನಗರ ಬಂದ್ ಶಾಂತಿಯುತವಾಗಿತ್ತು.
ಬಂದ್ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಸಾರಿಗೆ ಸಂಸ್ಥೆ ಬಸ್ ಸೇರಿದಂತೆ ವಾಹನಗಳ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಪ್ರಮುಖ ವೃತ್ತಗಳಲ್ಲಿ ಹೋರಾಟ ಸಮಿತಿಯ ಮುಖಂಡರು ಟೈರ್ ಗಳಿಗೆ ಬೆಂಕಿ ಹಚ್ವಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಂಗಡಿಗಳು, ಸಿನಿಮಾ ಥೇಟರ್, ಅರೆ ಸರಕಾರಿ ಕಚೇರಿಗಳು ಮುಚ್ಚಲ್ಪಟ್ಟಿದ್ದರೆ, ಖಾಸಗಿ ಶಾಲಾಜಾಲೇಜುಗಳಿಗೆ ರಜೆ ನೀಡಲಾಗಿತ್ತು. ಸರಕಾರಿ ಕಚೇರಿ ಶಾಲೆ ಕಾಲೇಜುಗಳು ತೆರೆದಿತ್ತು. ವಕೀಲರು, ವಾಣಿಜ್ಯೋದ್ಯಮ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ ಪ್ರತಿನಿಧಿಗಳು ಬಂದ್ ಬೆಂಬಲಿಸಿ ಹೋರಾಟದಲ್ಲಿ ಭಾಗವಹಿಸಿದ್ದರು.
ವಿಚಿತ್ರವೆಂದರೆ ಬಳ್ಳಾರಿ ಜಿಲ್ಲೆ ವಿಭಜನೆಗೆ ಕಾಂಗ್ರೆಸ್ ನಾಯಕರು ಬೆಂಬಲ ವ್ಯಕ್ತಪಡಿಸಿದ್ದು, ಗಣಿ ರೆಡ್ಡಿ ಪಡೆ ತೀವ್ರವಾಗಿ ವಿರೋಧಿಸುತ್ತಿದೆ. ಹೀಗಾಗಿ ಬಿಜೆಪಿ ಪಾಳಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬೆಳವಣಿಗೆ ನಡುವೆ ಬುಧವಾರ ಮುಖ್ಯಮಂತ್ರಿ ಯಡಿಯೂರಪ್ಪ ಕರೆದಿರುವ ಸಭೆ ಅತ್ಯಂತ ನಿರ್ಣಾಯಕವಾಗಿದೆ.
ಹೊಸ ಜಿಲ್ಲೆ ರಚನೆಯನ್ನು ಬೆಂಬಲಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದ ಕಾಂಗ್ರೆಸ್ ಮುಖಂಡರು ಮತ್ತು ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ ಅವರ ಧೋರಣೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಇಬ್ಬರೂ ಮುಖಂಡರ ನಿವಾಸಗಳ ಮುಂದೆ ಬಂದ್ ಗೆ ಬೆಂಬಲನೀಡುವಂತೆ ಪ್ರತಿಭಟನೆ ನಡೆಸಿದ ಹೋರಾಟಗಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರು ಅಲ್ಲಿಂದ ಹೋರಾಟಗಾರರನ್ನು ಚದುರಿಸಿದರು.
ಜಿಲ್ಲಾಧಿಕಾರಿ ಎಸ್.ಎಸ್. ನಕುಲು ಮಾತನಾಡಿ, ಬಂದ್ ಬಹುತೇಕ ಶಾಂತಿಯುತವಾಗಿದೆ. ವಿಜಯನಗರ ಜಿಲ್ಲೆ ರಚನೆ ಕುರಿತು ಮುಖ್ಯಮಂತ್ರಿ ಅವರು ವರದಿ ಕೇಳಿದ್ದು, ಜಿಲ್ಲೆಯ ಬೌಗೋಳಿಕ ವಿಸ್ತೀರ್ಣ, ರಾಜ್ಯ, ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿ. ಜನ ಸಾಂದ್ರತೆ , ಕ್ಷೇತ್ರವಾರು ವಿಭಜನೆ ಕುರಿತು ವರದಿ ನೀಡಲಾಗಿದೆ ಎಂದರು.
ಕೆ.ಸಿ. ಕೊಂಡಯ್ಯ ಮಾತನಾಡಿ, ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಈಗಿರುವ ಬಳ್ಳಾರಿ ಜಿಲ್ಲೆಯನ್ನು ಇಬ್ಬಾಗ ಮಾಡಿ ಹೊಸ ಜಿಲ್ಲೆ ರಚನೆ ನಿರ್ಧಾರ ಸೂಕ್ತವಾಗಿದೆ. ಹಡಗಲಿ ಮತ್ತು ಹರಪನಹಳ್ಳಿ ತಾಲೂಕಿನ ಕೊನೆ ಭಾಗದ ಜನ ಜಿಲ್ಲಾಕೇಂದ್ರಕ್ಕೆ ಬರಲು ತುಂಬಾ ಕಷ್ಟಪಡುತ್ತಾರೆ. ಈ ನಿಟ್ಟಿನಲ್ಲಿ ಇಲ್ಲಿ ಮತ್ತೊಂದು ಜಿಲ್ಲೆ ರಚನೆ ಮಾಡಬೇಕೆಂಬ ಕೂಗು ಕಳೆದ 25 ವರ್ಷಗಳಿಂದ ಇದೆ. ಇದೇನು ಹೊಸತಲ್ಲ. ಬಳ್ಳಾರಿ ವಿಭಜನೆ ಇಂದಿನವರಿಗೆ ಸಾಧ್ಯವಾಗಿರಲಿಲ್ಲ. ಈಗ ಯಡಿಯೂರಪ್ಪ ಅವರು ಮುಂದಾಗಿದ್ದಾರೆ. ಈ ಕುರಿತು ಚರ್ಚಿಸಲು ಬುಧವಾರ ಮಧ್ಯಾಹ್ನ ಯಡಿಯೂರಪ್ಪ ಅವರು ಜಿಲ್ಲೆಯ ಜನ ಪ್ರ ತಿನಿಧಿಗಳ ಸಭೆ ಕರೆದಿದ್ದಾರೆ. ಇಬ್ಬಾಗ ಬೇಡ ಎನ್ನುವವರು ಸಕಾರಣಗಳನ್ನು ನೀಡಿ ವಿಭಜನೆಯನ್ನು ತಡೆಯಬಹುದು ಎಂದರು.
ಅಲ್ಲಂ ವೀರಭದ್ರಪ್ಪ ಮಾತನಾಡಿ, ಹೊಸ ಜಿಲ್ಲೆ ರಚಿಸುವ ಸಂಬಂಧ ಎಲ್ಲಾ ಪಕ್ಷಗಳ ಜನ ಪ್ರತಿನಿಧಿಗಳು, ಮುಖಂಡರನ್ನು ಕರೆದು ಚರ್ಚಿಸಿ ಆನಂತರ ಸೂಕ್ತ ನಿರ್ಧಾರ ಪ್ರಕಟಿಸಬೇಕು. ವಿನಾಕರಾಣ ಜಿಲ್ಲೆಯಲ್ಲಿ ಅಶಾಂತಿಗೆ ಅವಕಾಶ ನೀಡಬಾರದು. ನಮ್ಮ ಕುಟುಂಬ ಈ ಹಿಂದೆ ಬಳ್ಳಾರಿ ಜಿಲ್ಲೆಯನ್ನು ಆಂದ್ರಪ್ರದೇಶಕ್ಕೆ ಸೇರಿಸಲು ಮುಂದಾಗಿದ್ದಾಗ ಕರ್ನಾಟಕದಲ್ಲೇ ಇರಬೇಕೆಂದು ಹೋರಾಟ ಮಾಡಿತ್ತು. ಈ ಹಿಂದೆ ಹರಪನಹಳ್ಳಿಯನ್ನು ದಾವಣಗೆರೆ ಜಿಲ್ಲೆಗೆ ಸೇರಿಸುವುದನ್ನು ಸಹ ತಾವು ವಿರೋಧಿಸಿದ್ದಾಗಿ ಹೇಳಿದರು.
ಬಳ್ಳಾರಿ ಜಿಲ್ಲೆಯ ಇಬ್ಭಾಗಕ್ಕೆ ಪೂರ್ವ ತಾಲೂಕುಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪೂರ್ವ ಮತ್ತು ಪಶ್ಚಿಮ ತಾಲ್ಲೂಕುಗಳ ಜನರ ಮಧ್ಯೆ ಈ ವಿಷಯ ದ್ವೇಷಕ್ಕೆ ಕಾರಣವಾಗುತ್ತಿದೆ. ಅಶಾಂತಿಯನ್ನು ತರುತ್ತಿದೆ. ಜಿಲ್ಲೆಯಲ್ಲಿ ಈವರೆಗೆ ಭಾಷಾ ವೈಷ್ಯಮ್ಯವಾಗಲಿ, ಗಡಿ ವೈಷಮ್ಯವಾಗಲಿ ಇಲ್ಲ. ಸಮಸ್ಯೆಯನ್ನು ಮುಖ್ಯಮಂತ್ರಿ ಅವರು ಸೌಹಾರ್ದಯುತವಾಗಿ ಬಗೆಹರಿಸಬೇಕು ಎಂದರು.
Advertisement