ವಿಜಯಪುರ: ಪೊಲೀಸರಿಂದ ದಂಡ ತಪ್ಪಿಸಿಕೊಳ್ಳಲು ಹೋಗಿ ಟಂಟಂವೊಂದು ಸರ್ಕಾರಿ ಬಸ್ ಗೆ ಡಿಕ್ಕಿ ಹೊಡೆದಿದ್ದು, ಟಂಟಂನಲ್ಲಿದ್ದ ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಬುಧವಾರ ನಡೆದಿದೆ.
ಇಂದು ಬೆಳಗ್ಗೆ ಕೋಲ್ಹಾರ ಬಳಿ ಈ ದುರ್ಘಟನೆ ನಡೆದಿದ್ದು, ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೆ ಇನ್ನೋರ್ವ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರೆಲ್ಲರೂ ಬೀಳಗಿ ತಾಲೂಕಿನ ಗಿರಿಸಾಗರದವರು ಎನ್ನಲಾಗಿದೆ.
ಅಪಘಾತವಾಗಿ ಸಾವು, ನೋವು ಸಂಭವಿಸುತ್ತಿದ್ದಂತೆಯೇ ಜನರು ಪೊಲೀಸರ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರಿಂದ ದಂಡ ತಪ್ಪಿಸಿಕೊಳ್ಳಲು ಹೋದ ಟಂಟಂ ಸರ್ಕಾರಿ ಬಸ್ಗೆ ಡಿಕ್ಕಿಯಾಗಿತ್ತು. ಇದರಿಂದಲೇ ಅಪಘಾತವಾಗಿದೆ ಎಂದು ಆರೋಪಿಸಿದ ಜನರು, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.
ಸಾರ್ವಜನಿಕರು ಪಿಎಸ್ಐ ಹಾಗೂ ಪೇದೆಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಪಿಎಸ್ಐ ಅನಿಲ್ ಕುಂಬಾರ ಕೈ ಮೂಳೆ ಮುರಿದಿದೆ. ಅಲ್ಲದೆ ಪಿಎಸ್ಐ ವಾಹನಕ್ಕೆ ಬೆಂಕಿ ಹಚ್ಚಿದ್ದಲ್ಲದೆ ಕಲ್ಲುತೂರಾಟ ಸಹ ನಡೆಸಿದ್ದಾರೆ.
Advertisement