ಬೆಂಗಳೂರು: 2008ರ ಬೆಂಗಳೂರು ಸರಣಿ ಸ್ಪೋಟದ ಆರೋಪಿ ಮತ್ತು ಕೇರಳ ಪ್ರಜಾಸತ್ತಾತ್ಮಕ ಪಾರ್ಟಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಮದನಿ ಕರ್ನಾಟಕದ ಇದುವರೆಗಿನ ವಿಚಾರಣಾಧೀನ ಕೈದಿಗಳ ಪೈಕಿ ಅತ್ಯಂತ ದುಬಾರಿ ಎನಿಸಿಕೊಂಡಿದ್ದಾನೆ.
ಮದನಿಯನ್ನು 2010ರಲ್ಲಿ ಕೇರಳದಲ್ಲಿ ಬಂಧಿಸಿ ನಂತರ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿಡಲಾಗಿದೆ. ಜುಲೈ 2014ರಲ್ಲಿ ಆತನಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ನೀಡುವಾಗ, ಆತನು ಬೆಂಗಳೂರು ನಗರ ಬಿಟ್ಟು ಹೋಗದಂತೆ ಸೂಕ್ತ ಭದ್ರತೆ ನೀಡಬೇಕೆಂದು ಪೊಲೀಸರಿಗೆ ಆದೇಶ ನೀಡಿತ್ತು. ಅಲ್ಲಿಂದ ಮದನಿ ಬೆಂಗಳೂರು ಪೊಲೀಸರ ಕಣ್ಗಾವಲಿನಲ್ಲಿದ್ದಾನೆ. ಆತನ ಭದ್ರತೆಗೆ ಸುಮಾರು 1 ಕೋಟಿ ರೂಪಾಯಿ ವೆಚ್ಚ ಹಿಡಿಯುತ್ತದೆ. ನಗರ ಸಶಸ್ತ್ರ ಮೀಸಲು ಪಡೆಯ ನಾಲ್ವರು ಕಾನ್ಸ್ಟೇಬಲ್ ಗಳು ದಿನಪೂರ್ತಿ ಆತನನ್ನು ಕಾಯುತ್ತಿರುತ್ತಾರೆ.
ಕಾನ್ಸ್ಟೇಬಲ್ ವೊಬ್ಬರ ತಿಂಗಳ ವೇತನ ಕನಿಷ್ಠ 30 ಸಾವಿರವೆಂದರೂ 4 ಮಂದಿ ಕಾನ್ಸ್ಟೇಬಲ್ ಗಳ ತಿಂಗಳ ವೇತನದ ವೆಚ್ಚವೇ ರಾಜ್ಯ ಸರ್ಕಾರದ ಖಜಾನೆಗೆ 1 ಲಕ್ಷಕ್ಕೂ ಹೆಚ್ಚಾಗುತ್ತದೆ. ಇಷ್ಟು ಮಾತ್ರವಲ್ಲದೆ ಮದನಿ ಕೋರ್ಟ್ ಒಪ್ಪಿಗೆ ಪಡೆದು ಕೇರಳಕ್ಕೆ ಹೋಗುವಾಗ ಪೊಲೀಸ್ ಭದ್ರತೆ ನೀಡಬೇಕಾಗುತ್ತದೆ ಎನ್ನುತ್ತಾರೆ ಅಧಿಕಾರಿಯೊಬ್ಬರು.
2017ರಲ್ಲಿ ಮದನಿ ಕೇರಳದಲ್ಲಿ ತನ್ನ ಪುತ್ರನ ಮದುವೆಯಲ್ಲಿ ಭಾಗವಹಿಸಲು ಕೋರ್ಟ್ ಅನುಮತಿ ಪಡೆದು ಹೋಗಿದ್ದನು. 19 ಸದಸ್ಯರ ಬೆಂಗಾವಲು ತಂಡಕ್ಕೆ ಖರ್ಚಿಗೆ 14.79 ಲಕ್ಷ ರೂಪಾಯಿ ಕೇಳಿದ್ದರು ನಗರ ಪೊಲೀಸರು. ಆಗ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮದನಿಯ ಭದ್ರತೆ ವೆಚ್ಚವನ್ನು ತಗ್ಗಿಸುವಂತೆ ಕೋರಿದ್ದರು.
ಮದನಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದ ನಂತರ ಆಸ್ಪತ್ರೆಗೆ ಹೋಗಿ ಬಂದು ಮಾಡುತ್ತಾ ಇರುತ್ತಾನೆ. ವೀಲ್ ಚೇರ್ ನಲ್ಲಿ ಕುಳಿತುಕೊಂಡು ಹೋಗುವ ಮದನಿಗೆ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಅಂಗಾಂಗ ತೊಂದರೆಯಿಂದ ಬಳಲುತ್ತಿದ್ದಾನೆ. ಕಳೆದ ತಿಂಗಳು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿರುವ ಅಂತಾರಾಷ್ಟ್ರೀಯ ಖ್ಯಾತಿಯ ಸೌಖ್ಯ ಕೇಂದ್ರಕ್ಕೆ ದಾಖಲಾಗಿದ್ದನು.
Advertisement