ಮೈಸೂರು: ಐತಿಹಾಸಿಕ ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಜಂಬೂ ಸವಾರಿ ಮೆರವಣಿಗೆ ಆರಂಭವಾಗಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಶುಭ ಕುಂಭ ಲಗ್ನದಲ್ಲಿ ಅರ್ಜುನನ ಮೇಲಿನ ಅಂಬಾರಿಯಲ್ಲಿ ವಿರಾಜಮಾನವಾಗಿರುವ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಮೈಸೂರು ರಾಜವಂಶಸ್ಥ ಯುದುವೀರ್ ಕೃಷದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಮೇಯರ್ ಪುಷ್ಪಲತಾ, ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಪುಷ್ಪಾರ್ಚನೆ ಮಾಡಿದರು.
750 ಕೆಜಿ ತೂಕದ ಅಂಬಾರಿ ಹೊತ್ತಿರುವ ಅರ್ಜುನ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದರೆ , ಕುಮ್ಕಿ ಆನೆಗಳಾದ ಕಾವೇರಿ ಹಾಗೂ ವಿಜಯ್ ಅರ್ಜುನನಿಗೆ ಸಾಥ್ ನೀಡಿದವು. ಅರ್ಜುನನ ಬಲಭಾಗದಲ್ಲಿ ಕಾವೇರಿ ಹಾಗೂ ಎಡಭಾಗದಲ್ಲಿ ವಿಜಯ್ ಆನೆಗಳು ಮೆರವಣಿಗೆಯಲ್ಲಿ ಸಾಗಿದವು.
ರಸ್ತೆಯ ಇಕ್ಕೆಲ್ಲಗಳಲ್ಲಿ ಹಾಗೂ ಸುತ್ತಮುತ್ತಲಿನ ಕಟ್ಟಡಗಳ ಮೇಲೆರಿ ಕುಳಿತಿರುವ ಸಹಸ್ರಾರು ಸಂಖ್ಯೆಯ ಪ್ರವಾಸಿಗರು ಈ ಅದ್ದೂರಿ ಮೆರವಣಿಗೆಯನ್ನು ಕಣ್ತುಂಬಿಕೊಂಡರು.
ಕೋಟೆ ಆಂಜನೇಯದೇವಾಲಯದಿಂದ ಮೆರವಣಿಗೆ ಆರಂಭಗೊಂಡಿದ್ದು, ಚಾಮರಾಜೇಂದ್ರ ವೃತ್ತ,ಸಯ್ಯಾಜಿರಾವ್ ರಸ್ತೆ, ಆಯುರ್ವೇದ ವೃತ್ತ, ಬಂಬೂ ಬಜಾರ್, ಹೈವೆ ಸರ್ಕಲ್ ಮೂಲಕ ಸಂಜೆ ಬನ್ನಿಮಂಟಪದ ಕವಾಯತು ಮೈದಾನ ತಲುಪಿತು.
Advertisement