ನಾನು ಅಲ್ಲಿ ಇದ್ದಿದ್ದರೆ ಚಂದನ್ ಶೆಟ್ಟಿ ನಿವೇದಿತಾರ ಮದುವೆ ಮಾಡಿಸುತ್ತಿದ್ದೆ: ವಾಟಾಳ್ ನಾಗರಾಜ್
ಬೆಂಗಳೂರು: ಅಂದು ಯುವ ದಸರಾ ಕಾರ್ಯಕ್ರಮದಲ್ಲಿ ನಾನು ಇದ್ದಿದ್ದರೆ ಅಲ್ಲೇ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಮದುವೆ ಮಾಡಿಸುತ್ತಿದ್ದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ- ನಿವೇದಿತಾ ಗೌಡ ಅವರಿಗೆ ಪ್ರೇಮನಿವೇದನೆ ಮಾಡಿದ ವಿಚಾರ ಇದೀಗ ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಈ ವಿಚಾರದ ಪರ-ವಿರೋಧದ ಚರ್ಚೆ ಸಾಗಿರುವಂತೆಯೇ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ವಾಟಾಳ್ ನಾಗರಾಜ್, 'ಯುವ ದಸರಾ ಕಾರ್ಯಕ್ರಮದಲ್ಲಿ ಪ್ರೇಮ ನಿವೇದನೆ ಮಾಡಿಕೊಂಡ ಚಂದನ್ ಶೆಟ್ಟಿಗೆ ನನ್ನ ಬೆಂಬಲವಿದೆ. ಪ್ರೇಮಿಗಳಿಗೆ ನನ್ನ ಬೆಂಬಲ ಯಾವಾಗಲೂ ಇದ್ದೇ ಇರುತ್ತದೆ. ನಾನು ಅಲ್ಲಿ ಇದ್ದಿದ್ದರೆ ಅವರಿಬ್ಬರಿಗೂ ಮದುವೆ ಮಾಡಿಸುತ್ತಿದ್ದೆ ಎಂದು ಹೇಳಿದ್ದಾರೆ.
ಅಂತೆಯೇ ಚಂದನ್ ಮತ್ತು ನಿವೇದಿತಾ ವಿರುದ್ಧ ದಾಖಲಾಗಿರುವ ಪ್ರಕರಣದಕುರಿತೂ ಮಾತನಾಡಿದ ಅವರು, ಅವರ ಮೇಲೆ ಪೊಲೀಸ್ ದೂರು ದಾಖಲಿಸಿರುವುದು ತಪ್ಪು. ಅವರನ್ನು ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರು ಮದುವೆ ಮಾಡಿಸಬೇಕಿತ್ತು. ಅದನ್ನು ಬಿಟ್ಟು ಕೇಸ್ ಹಾಕಿದ್ದಾರೆ. ನಾನು ದಸರಾ ಮುಗಿದ ಮೇಲೆ ಈ ವಿಚಾರವಾಗಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇನೆ. ನಾವು ಅವರಿಗೆ ಬೆಂಬಲ ನೀಡಬೇಕು. ಅದನ್ನು ಬಿಟ್ಟು ಮಂತ್ರಿ ರೀತಿ ಶಾಪ ಹಾಕಬಾರದು. 6 ತಿಂಗಳ ನಂತರ ಏನೋ ಆಗುತ್ತೆ ಎಂದು ಶಾಪ ಹಾಕಿದರೆ ಅವರ ಗತಿ ಏನ್ ಆಗಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಕಳೆದ ಶನಿವಾರ ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರಿಗೆ ವೇದಿಕೆಯಲ್ಲೇ ಪ್ರೇಮ ನಿವೇದನೆ ಮಾಡಿದ್ದರು. ಸಂಗೀತ ಕಾರ್ಯಕ್ರಮ ನೀಡಿ ಜನರನ್ನು ಮನರಂಜಿಸುತ್ತಿದ್ದ ಚಂದನ್ ವೇದಿಕೆಯಲ್ಲೇ ನಿವೇದಿತಾ ಅವರಿಗೆ ಮಂಡಿಯೂರಿ ಪ್ರೇಮನಿವೇದನೆ ಮಾಡಿದ್ದರು ಅಲ್ಲದೇ ಉಂಗುರ ಕೂಡ ತೊಡಿಸಿದ್ದರು. ಈ ವೇಳೆ ನೆರೆದಿದ್ದ ಮಂದಿ ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟುವ ಮೂಲಕ ಇಬ್ಬರನ್ನೂ ಅಭಿನಂದಿಸಿದ್ದರು. ವಿಶೇಷವೆಂದರೆ ಇದೇ ಕಾರ್ಯಕ್ರಮದಲ್ಲಿ ಇವರಿಬ್ಬರ ಪೋಷಕರು ಕೂಡ ಹಾಜರಿದ್ದರು.