ಮನೆಗೆ ಬಂದಿದ್ದ 4 ಐಟಿ ಅಧಿಕಾರಿಗಳು ನನ್ನ ಪತಿಯನ್ನು ಕರೆದುಕೊಂಡು ಹೋಗಿದ್ದರು: ರಮೇಶ್ ಪತ್ನಿ

ಆತ್ಮಹತ್ಯೆ ಮಾಡಿಕೊಂಡಿರುವ ರಮೇಶ್ ಅವರ ಮನೆಗೆ ಹೋಗಿಯೇ ಇಲ್ಲ ಎಂದು ಒಂದೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದರೆ, ಮತ್ತೊಂದೆಡೆ ರಮೇಶ್ ಅವರ ಪತ್ನಿ ಐಟಿ ಅಧಿಕಾರಿಗಳೇ ಮನೆಗೆ ಬಂದು ಪತಿಯನ್ನು ಕರೆದುಕೊಂಡು ಹೋಗಿದ್ದರು ಎಂದು ಹೇಳಿಕೆ ನೀಡಿದ್ದಾರೆ. 
ರಮೇಶ್ ಬರೆದಿಟ್ಟಿರುವ ಆತ್ಮಹತ್ಯೆ ಪತ್ರ
ರಮೇಶ್ ಬರೆದಿಟ್ಟಿರುವ ಆತ್ಮಹತ್ಯೆ ಪತ್ರ

ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡಿರುವ ರಮೇಶ್ ಅವರ ಮನೆಗೆ ಹೋಗಿಯೇ ಇಲ್ಲ ಎಂದು ಒಂದೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದರೆ, ಮತ್ತೊಂದೆಡೆ ರಮೇಶ್ ಅವರ ಪತ್ನಿ ಐಟಿ ಅಧಿಕಾರಿಗಳೇ ಮನೆಗೆ ಬಂದು ಪತಿಯನ್ನು ಕರೆದುಕೊಂಡು ಹೋಗಿದ್ದರು ಎಂದು ಹೇಳಿಕೆ ನೀಡಿದ್ದಾರೆ. 

ರಮೇಶ್ ಅವರ ಪತ್ನಿ ಸೌಮ್ಯ ಪ್ರತಿಕ್ರಿಯೆ ನೀಡಿದ್ದು, ಗುರುವಾರ ಮಧ್ಯಾಹ್ನ ಕಾರೊಂದರಲ್ಲಿ ಮನೆಗೆ ಬಂದಿದ್ದ ಐಟಿ ಅಧಿಕಾರಿಗಳು ರಮೇಶ್ ಅವರ ಮೊಬೈಲ್ ವಶಕ್ಕೆ ಪಡೆದುಕೊಳ್ಳುವುದಕ್ಕೂ ಮುನ್ನ ಮನೆಯ ಕೊಠಡಿಗಳನ್ನು ಪರಿಶೀಲನೆ ನಡೆಸಿದ್ದರು. ಮಹಿಳೆಯೊಬ್ಬರು ಸೇರಿ ಒಟ್ಟು ನಾಲ್ವರು ಐಟಿ ಅಧಿಕಾರಿಗಳು ಮನೆಗೆ ಬಂದಿದ್ದರು ಎಂದು ಹೇಳಿದ್ದಾರೆ. 

ಪುರುಷ ಅಧಿಕಾರಿಯೊಬ್ಬರು ಹಿಂದಿ ಹಾಗೂ ತೆಲುಗು ಮಾತನಾಡುತ್ತಿದ್ದರು, ಮಹಿಳಾ ಅಧಿಕಾರಿ ಕನ್ನಡದಲ್ಲಿ ಮಾತನಾಡುತ್ತಿದ್ದರು. ಸಂಜೆ 6.30ರವರೆಗೂ ಅಧಿಕಾರಿಗಳು ನಮ್ಮ ಮನೆಯಲ್ಲಿಯೇ ಇದ್ದರು. ಬಳಿಕ ನನ್ನ ಪತಿಯನ್ನು ಕರೆದುಕೊಂಡು ಹೋಗಿದ್ದರು. ಕೆಲ ಗಂಟೆಗಳ ಬಳಿಕ ಪತಿ ಮೊಬೈಲ್'ಗೆ ಕರೆ ಮಾಡಿದ್ದೆ. ಈ ವೇಳೆ ಮಹಿಳೆಯೊಬ್ಬರು ಮಾತನಾಡಿ, ಕೆಲ ದಿನಗಳವರೆಗೂ ರಮೇಶ್ ಅವರನ್ನು ಸಂಪರ್ಕಿಸದಂತೆ ತಿಳಿಸಿದ್ದರು. ಇದು ನನಗೆ ಸಾಕಷ್ಟು ಆತಂಕವನ್ನು ಎದುರು ಮಾಡಿತ್ತು. ಬಳಿಕ ಪರಮೇಶ್ವರ ಅವರ ಕಚೇರಿ ಸಿಬ್ಬಂದಿಗಳನ್ನು ಸಂಪರ್ಕಿಸಲು ಯತ್ನಿಸಿದ್ದೆ ಎಂದು ತಿಳಿಸಿದ್ದಾರೆ. 

ಶನಿವಾರ ಬೆಳಿಗ್ಗೆ 5.30ರ ಸುಮಾರಿಗೆ ರಮೇಶ್ ಮನೆಗೆ ಬಂದಿದ್ದರು. ಬಳಿಕ ಎರಡು ಗಂಡೆಗಳ ಕಾಲ ಮಲಗಿದ್ದರು. ಬಳಿಕ ಪುತ್ರ ಮೋಹಿತ್'ನನ್ನು ಕಾರಿನಲ್ಲಿ ಶಾಲೆಗೆ ಬಿಡಲು ತೆರಳಿದ್ದರು. ಮತ್ತೆ ಮನೆಗೆ ಬಂದಿದ್ದರು. 8.30ರ ಸುಮಾರಿಗೆ ತಿಂಡಿ ತಿಂದು, 8.45ಕ್ಕೆ ಮನೆಯಿಂದ ಹೊರಗೆ ಹೋಗಿದ್ದರು. ಐಟಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು. ಹೀಗೇ ಆದರೆ, ನಾನು ಸತ್ತು ಹೋಗುತ್ತೇನೆಂದು ಹೇಳಿದ್ದರು. ಕೇವಲ ಮಾತಷ್ಟೇ ಎಂದು ನಾನು ನಿರ್ಲಕ್ಷಿಸಿದ್ದೆ. ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. 

ಇದಾದ ಬಳಿಕ ಪತಿಯನ್ನು ಸಮಾಧಾನ ಪಡಿಸಲು ಪ್ರಯತ್ನ ಕೂಡ ನಡೆಸಿದ್ದೆ. ಆದರೂ ಅದಾವುದೂ ಕೆಲಸಕ್ಕೆ ಬರಲಿಲ್ಲ. ರಮೇಶ್ ಮನೆಯಿಂದ ಹೊರಗೆ ಹೋದ ಸಂದರ್ಭದಲ್ಲಿ ಪುತ್ರಿಯೊಂದಿಗೆ ನಾನು ಟಿವಿ ನೋಡುತ್ತಿದ್ದೆ. 10.30ರ ಸುಮಾರಿಗೆ ರಮೇಶ್ ನಾಪತ್ತೆಯಾಗಿದ್ದಾರೆಂಬ ಸುದ್ದಿ ಬಂದಗಿತ್ತು. ಮೊಬೈಲ್ ಆಫ್ ಆಗುವುದಕ್ಕೂ ಮುನ್ನ ಗೆಳೆಯರಿಗೆ ಕರೆ ಮಾಡಿದ್ದರೆಂದು ಹೇಳಲಾಗುತ್ತಿತ್ತು. ಇದಾದ ಬಳಿಕ ನಾನೂ ಕೂಡ ಪತಿಯೊಂದಿಗೆ ಮಾತನಾಡಲು ಯತ್ನಿಸಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ. ಇದಾದ ಕೆಲವೇ ನಿಮಿಷಗಳಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಸುದ್ದಿ ಬಂದಿತ್ತು ಎಂದು ಹೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com