ಮಂಡ್ಯ: ಜಿಲ್ಲೆಯ ರೈತರ ಪಾಲಿನ ಜೀವನದಿ, ಸಿಲಿಕಾನ್ ಸಿಟಿ ಜನರ ಜೀವಸಲೆ. ತಮಿಳಿಗರ ಒಡಲ ಜೀವ ಕೆಆರ್ಎಸ್ ಜಲಾಶಯ ಇಂದು ಐತಿಹಾಸಿಕ ದಾಖಲೆ ಬರೆದಿದೆ..
ಹೌದು.. 2006 ರ ಬಳಿಕ ಧೀರ್ಘಕಾಲ ಭರ್ತಿಯಾಗಿ ಉಳಿದ ಕೀರ್ತಿಗೆ ಕೃಷ್ಣರಾಜಸಾಗರ ಜಲಾಶಯ ಪಾತ್ರವಾಗಿದೆ. ಕೆಆರ್ ಎಸ್ ಅಣೆಕಟ್ಟು 120.80 ಅಡಿ ತುಂಬಿ 50 ದಿನಗಳು ಕಳೆದಿದ್ದು, 2006 ವರ್ಷ ಹೊರತು ಪಡಿಸಿದರೇ ಇದೇ ಮೊದಲ ಬಾರಿಗೆ 50 ದಿನಗಳ ತನಕ ತುಂಬಿದೆ. ಇದೀಗ 60ನೇ ದಿನತ್ತ ಕಾಲಿಟ್ಟಿದೆ.
ಈ ಹಿಂದೆ ಸತತ ನಾಲ್ಕು ವರ್ಷಗಳ ಕಾಲ ರಾಜ್ಯ ತೀವ್ರ ಬರದಿಂದ ತತ್ತರಿಸಿ ಹೋಗಿತ್ತು. ಇದೀಗ ಕಾವೇರಿ ಕೊಳ್ಳದಲ್ಲಿ ಸುರಿಯುತ್ತಿರುವ ಸತತ ಮಳೆ ಜಲಾಶಯ ದೀರ್ಘಕಾಲದವರೆಗೆ ಭರ್ತಿಯಾಗುವಂತೆ ಮಾಡಿದೆ.
ಈ ಹಿಂದೆ 2006ರಲ್ಲಿ 90 ದಿನ ತುಂಬಿದ್ದು ದಾಖಲೆಯಾಗಿತ್ತು. ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆ ಆಗುತ್ತಿದ್ದು, ಒಳ ಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಕುಶಾಲನಗರ, ಕೆಆರ್ ನಗರ, ಹುಣಸೂರು ವ್ಯಾಪ್ತಿಯಲ್ಲಿ ಮಳೆ ಶುರುವಾಗಿದ್ದು, ನದಿಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ನಿನ್ನೆ ಸಂಜೆಯಿಂದಲೇ 4 ಸಾವಿರ ಕ್ಯೂಸೆಕ್ ಗೂ ಹೆಚ್ಚು ನೀರು ಕಟ್ಟೆಗೆ ಹರಿದು ಬರುತ್ತಿದೆ, ಇಂದು ಬೆಳಗ್ಗೆ ಇದು 10 ಸಾವಿರ ಕ್ಯೂಸೆಕ್ ದಾಟಿತ್ತು .ಇನ್ನೂ ಒಳ ಹರಿವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದು,ಸದ್ಯಕ್ಕೆ 20 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ, ಮುನ್ನೆಚ್ಚರಿಕೆಯಾಗಿ ಹೊರ ಹರಿವಿನ ಪ್ರಮಾಣ ಹೆಚ್ಚಳ ಮಾಡಲಾಗುವುದು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಅಂತೂ 2006ರ ನಂತರ ಕೆಆರ್ಎಸ್ ಅಣೆಕಟ್ಟು ದೀರ್ಘಾವದಿ ವರೆಗೆ ತುಂಬಿದ್ದು, ರೈತರಿಗೆ ಮತ್ತಷ್ಟು ಸಂತಸ ತಂದಿದೆ. ಜೊತೆಗೆ ಜಿಲ್ಲೆಯಲ್ಲಿಯೂ ಆಗುತ್ತಿರುವ ಉತ್ತಮ ಮಳೆ ರೈತರಿಗೆ ಮತ್ತಷ್ಟು ನೆಮ್ಮದಿ ತರಿಸಿದೆ.
Advertisement