ಅಕ್ಟೋಬರ್ 17ರಿಂದ ಹರಿಹರ, ಹೊಸಪೇಟೆ ನಡುವೆ ಹೊಸ ಪ್ರಯಾಣಿಕರ ರೈಲು
ಬಳ್ಳಾರಿ: ಈ ಪ್ರದೇಶದ ದೀರ್ಘಕಾಲದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಅಂತಿಮವಾಗಿ ಪ್ರಯಾಣಿಕರ ರೈಲು ಪ್ರಾರಂಭಿಸಲು ನಿರ್ಧರಿಸಿದ್ದು, ಕೊಟ್ಟೂರು ಮಾರ್ಗವಾಗಿ ಹರಿಹರ ಮತ್ತು ಹೊಸಪೇಟೆ ನಡುವೆ ನೂತನ ಪ್ರಯಾಣಿಕೆ ರೈಲು ಗುರುವಾರದಿಂದ ಸಂಚಾರ ಆರಂಭಿಸಲಿದೆ.
ನೈಋತ್ಯ ರೈಲ್ವೆ(ಎಸ್ಡಬ್ಲ್ಯುಆರ್) ಪ್ರಕಾರ, ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಅಕ್ಟೋಬರ್ 17 ರಂದು ಹೊಸಪೇಟೆ-ಕೊಟ್ಟೂರು ಪ್ರಯಾಣಿಕರ ರೈಲಿಗೆ 11 ಗಂಟೆಗೆ ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡುತ್ತಾರೆ. ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಹಸಿರು ನಿಶಾನೆ ನೀಡಲಿದ್ದಾರೆ.
ಈ ರೈಲು ಬೆಂಗಳೂರು ಮತ್ತು ಹೊಸಪೇಟೆ ನಡುವಿನ ಪ್ರಯಾಣದ ಸಮಯವನ್ನು ಕಡಿತಗೊಳಿಸುತ್ತದೆ. ಈ ಮಾರ್ಗವು ಬೆಂಗಳೂರು-ಹುಬ್ಬಳ್ಳಿ ಮುಖ್ಯ ಮಾರ್ಗವನ್ನು ಹುಬ್ಬಳ್ಳಿ-ಗುಂಟಕಲ್ ಮಾರ್ಗದೊಂದಿಗೆ ಸಂಪರ್ಕಿಸುತ್ತದೆ ಮತ್ತು ವಿಜಯಪುರ, ಬಾದಾಮಿ ಮತ್ತು ಹಂಪಿಯಂತಹ ಹಲವಾರು ಪಾರಂಪರಿಕ ತಾಣಗಳನ್ನು ಬೆಂಗಳೂರಿನೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ.
19ನೇ ಶತಮಾನದಲ್ಲಿ, ಕೊಟ್ಟೂರಿನಿಂದ ಹತ್ತಿಯನ್ನು ತೆಗೆದುಕೊಳ್ಳಲು ಬ್ರಿಟಿಷರು ಈ ರೈಲ್ವೆ ಮಾರ್ಗವನ್ನು ಮಾಡಿದ್ದರು. 1994 ರವರೆಗೆ, ಪ್ರಯಾಣಿಕರ ರೈಲು ಕೂಡ ಮಾರ್ಗದಲ್ಲಿತ್ತು. ಆದಾಗ್ಯೂ, ಬ್ರಾಡ್ ಗೇಜ್ಗೆ ಬದಲಾಯಿಸಿದ ನಂತರ, ರೈಲು ಸಂಚಾರ ಸ್ಥಗಿತಗೊಂಡಿತು.