ಬೆಂಗಳೂರು: ಪೊಲೀಸರ ವೇತನ ಪರಿಷ್ಕರಣೆ ಕುರಿತಾದ ಔರಾದ್ಕರ್ ವರದಿ ಸದ್ಯಕ್ಕೆ ಜಾರಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಔರಾದ್ಕರ್ ವರದಿ ಜಾರಿಗೆ ಹಿಂದೇಟು ಹಾಕುತ್ತಿರುವ ರಾಜ್ಯ ಸರ್ಕಾರ ಇದೀಗ ಪೊಲೀಸರ ಮೂಗಿಗೆ ತುಪ್ಪ ಸವರುವ ಕೆಲಸಕ್ಕೆ ಮುಂದಾಗಿದೆ.
ಔರಾದ್ಕರ್ ವರದಿ ಜಾರಿಗೆ ವಿಳಂಬ ಧೋರಣೆ ಅನುಸರಿಸುತ್ತಿರುವ ಸರ್ಕಾರ ಪೊಲೀಸರ ಕೆಂಗಣ್ಣಿಗೆ ಗುರಿಯಾಗದಂತೆ ಉಪಾಯವೊಂದನ್ನು ರೂಪಿಸಿದ್ದು, ಔರಾದ್ಕರ್ ವರದಿ ಜಾರಿಗೆ ಬದಲಾಗಿ ಸದ್ಯಕ್ಕೆ ಪೊಲೀಸರ ಶ್ರಮವೆಚ್ಚ ನೀಡುವ ಬಗ್ಗೆ ಚಿಂತನೆ ನಡೆಸಿದೆ.
ಔರಾದ್ಕರ್ ವರದಿ ಪಕ್ಕಕ್ಕಿಟ್ಟು ಶ್ರಮ ವೆಚ್ಚ ಹೆಚ್ಚಳ ಮಾಡುವ ಬಗ್ಗೆ ಗೃಹಸಚಿವ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದಾರೆ. ನಿಗದಿತ ಸಮಯಕ್ಕಿಂತ ಹೆಚ್ಚು ಕೆಲಸ ಮಾಡುವ ಪೊಲೀಸರಿಗೆ ಶ್ರಮವೆಚ್ಚ ಹೆಚ್ಚಿಸಲಾಗುತ್ತಿದೆ. ಪ್ರಸಕ್ತ ಒಂದು ಸಾವಿರ ರೂಪಾಯಿ ಇರುವ ಶ್ರಮ ವೆಚ್ಚವನ್ನು ಎರಡು ಸಾವಿರಕ್ಕೆ ಏರಿಕೆ ಮಾಡುವ ಬಗ್ಗೆ ಗೃಹಸಚಿವರು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ ಬೊಕ್ಕಸದಲ್ಲಿ ಹಣ ಕಡಿಮೆ ಇದ್ದು ನೆರೆ ಸಂತ್ರಸ್ತರಿಗೆ ಹಣ ಹೊಂದಿಸಬೇಕಿದೆ ಎಂದು ಈಗಾಗಲೇ ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದು, ಔರಾದ್ಕರ್ ವರದಿ ಜಾರಿಗೊಳಿಸಿದರೆ ಬೊಕ್ಕಸಕ್ಕೆ ಇನ್ನಷ್ಟು ಹೊರೆಯಾಗಬಹುದೆಂಬ ಲೆಕ್ಕಾಚಾರ ಸರ್ಕಾರದ್ದಾಗಿದೆ. ಹೀಗಾಗಿ ಬೀಸುವ ದೊಣ್ಣೆಯಿಂದ ಪಾರಾಗಲು ಔರಾದ್ಕರ್ ವರದಿ ಬದಲಿಗೆ ಪೊಲೀಸರ ಶ್ರಮ ವೆಚ್ಚ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ಶ್ರಮ ವೆಚ್ಚ ಕುರಿತು ಸ್ಪಷ್ಟ ಆದೇಶ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
Advertisement