ಬೆಂಗಳೂರು: ತಿಹಾರ್ ಜೈಲಿಗೆ ಸೋಮವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಭೇಟಿ ನೀಡುತ್ತಿದ್ದು, ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜೈಲು ಸೇರಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಶಿವಕುಮಾರ್ ಅವರನ್ನು ಭೇಟಿ ಮಾಡಲು ತಿಹಾರ್ ಜೈಲಿಗೆ ಭೇಟಿ ನೀಡುವ ಈ ಮೂಲಕ ಒಕ್ಕಲಿಗ ಸಮುದಾಯದ ಬಲಿಷ್ಟ ನಾಯಕನ ಬೆನ್ನಿಗೆ ಕಾಂಗ್ರೆಸ್ ಪಕ್ಷವಿದೆ ಎಂಬ ಸಂದೇಶವನ್ನು ಸೋನಿಯಾ ಸಾರುತ್ತಿದ್ದಾರೆ.
ಹರಿಯಾಣದಲ್ಲಿ ನಿಗದಿಯಾಗಿದ್ದ ರ್ಯಾಲಿಯಲ್ಲಿ ಅನಾರೋಗ್ಯ ಸಮಸ್ಯೆಯಿಂದಾಗಿ ಸೋನಿಯಾ ಗಾಂಧಿಯವರು ಭಾಗಿಯಾಗಿರಲಿಲ್ಲ.
ಈ ಹಿಂದೆ ಸೋನಿಯಾ ಗಾಂಧಿಯವರು ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರನ್ನು ಭೇಟಿ ಮಾಡಿ, ಎಲ್ಲಾ ಬೆಳವಣಿಗೆಗಳ ಕುರಿತು ಮಾಹಿತಿ ಪಡೆದುಕೊಂಡಿದ್ದರು. ಅಲ್ಲದೆ, ಸಹೋದರರಿಗೆ ಪಕ್ಷ ವತಿಯಿಂದ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ತಿಳಿಸಿದ್ದರು.
ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಾಯಕ ಚಿದಂಬರಂ ಅವರನ್ನು ಭೇಟಿ ಮಾಡಲು ಸೋನಿಯಾ ಅವರು ತಿಹಾರ್ ಜೈಲಿಗೆ ಭೇಟಿ ನೀಡಿದ್ದರು. ಈ ವೇಳೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಅಧಿಕಾರಿಗಳು ಬಿಟ್ಟಿರಲಿಲ್ಲ. ಅನುಮತಿ ಪಡೆದುಕೊಳ್ಳದ ಕಾರಣ ಭೇಟಿ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಅನುಮತಿ ಪಡೆದುಕೊಂಡಿದ್ದು, ಸೋಮವಾರ ಡಿಕೆಶಿಯವರನ್ನು ಭೇಟಿ ಮಾಡಲಿದ್ದಾರೆ.
Advertisement