ತುಮಕೂರು: ಕುರಿ ಮೈ ತೊಳೆಯಲು ಕೆರೆಗೆ ಇಳಿದಿದ್ದ ಒಂದೇ ಕುಟುಂಬದ ಮೂವರು ಸಾವು

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಹೊಸೂರು ಗ್ರಾಮದ ಕೆರೆಯಲ್ಲಿ ಭಾನುವಾರ ಕುರಿಗಳ ಮೈತೊಳೆಯಲು ಹೋದ ಒಂದೇ ಕುಟುಂಬದ ಮೂವರು ನೀರು ಪಾಲಾಗಿರುವ ದಾರುಣ ಘಟನೆ ನಡೆದಿದೆ.
ಮೃತದೇಹ
ಮೃತದೇಹ

ತುಮಕೂರು: ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಹೊಸೂರು ಗ್ರಾಮದ ಕೆರೆಯಲ್ಲಿ ಭಾನುವಾರ ಕುರಿಗಳ ಮೈತೊಳೆಯಲು ಹೋದ ಒಂದೇ ಕುಟುಂಬದ ಮೂವರು ನೀರು ಪಾಲಾಗಿರುವ ದಾರುಣ ಘಟನೆ ನಡೆದಿದೆ.

ಕಳುವರಹಳ್ಳಿ ಗ್ರಾಮದ ನಾಗರಾಜು (45), ಅವರ ಪತ್ನಿ ಮಮತಾ (42), ಮಗ ಕಿರಣ್ ಕುಮಾರ್(15) ಮೃತಪಟ್ಟ ದುರ್ದೈವಿಗಳು.

ಕುರಿಗಳಿಗೆ ಮೈತೊಳೆಯುವ ವೇಳೆ ಕೆರೆಯಲ್ಲಿದ್ದ ಗುಂಡಿ ಆಳವಾಗಿದ್ದ ಕಾರಣ ನಾಗರಾಜು ಆಯಾತಪ್ಪಿ ನೀರಿನಲ್ಲಿ ಮುಳಗಿದ್ದಾರೆ. ನೀರಿನಲ್ಲಿ ಮುಳುಗಿದ ಪತಿ ನಾಗರಾಜು ಮೇಲೆ ಬಾರದ ಕಾರಣ ಗಾಬರಿಗೊಂಡ ಪತ್ನಿ ಮಮತಾ ನೀರಿಗಿಳಿದ ತಕ್ಷಣ ಆಳವಾದ ನೀರು ಅವರನ್ನು ಮುಳುಗಿಸಿ ಬಿಟ್ಟಿದೆ. ತಂದೆ ತಾಯಿ ನೀರಿನಲ್ಲಿ ಮುಳುಗಿದ ನಂತರ ಅವರು ಮೇಲೆ ಬಾರದಿದ್ದಾಗ ಮಗ ಕಿರಣ್ ತಂದೆ ತಾಯಿ ರಕ್ಷಣೆಗೆ ಹೋಗಿ ತಾನು ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ.

ಕೆರೆಯ ಹಿನ್ನೀರಿನ ಪಕ್ಕದಲ್ಲಿಯೇ ಕುರಿ ಕಾಯುತ್ತಿದ್ದ ವ್ಯಕ್ತಿ ಈ ದೃಶ್ಯವನ್ನು ಕಂಡು ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದಾನೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಾರ್ವಜನಿಕರ ಸಹಕಾರದೊಂದಿಗೆ ಶೋಧ ಕಾರ್ಯ ನಡೆಸಿ ಮೃತ ದೇಹಗಳನ್ನು ಹೊರತೆಗೆದಿದ್ದಾರೆ.

ಕಿರಣ್ ಹೊಸೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ. ಮೂವರು ಕೆರೆಯಲ್ಲಿ ಕುರಿಗಳಿಗೆ ಮೈತೊಳೆಯುವ ಸಮಯದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ತಾವರೆಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com