ಬೆಂಗಳೂರು: ಕಾಲೇಜಿನ ಪ್ರಾಂಶುಪಾಲರು ನೀಡಿದ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿಯೊಬ್ಬ ಕಾಲೇಜು ಕಟ್ಟಡದ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕಸವನಹಳ್ಳಿ ಅಮೃತ ಕಾಲೇಜಿನಲ್ಲಿ ನಡೆದಿದೆ.
ಆಂಧ್ರಪ್ರದೇಶ ಮೂಲದ ಶ್ರೀಹರ್ಷ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದಾನೆ. ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿಟ್ಟಿರುವ ಶ್ರೀಹರ್ಷ ಕಾಲೇಜಿನ ಪ್ರಾಂಶುಪಾಲರ ಕಿರುಕುಳವೇ ತನ್ನ ಸಾವಿಗೆ ಕಾರಣವೆಂದು ಬರೆದಿದ್ದಾನೆ.
ಘಟನೆ ವಿವರ
ಆಂಧ್ರದವನಾದ ಶ್ರೀಹರ್ಷ ಅಮೃತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಕಾಲೇಜು ಹಾಸ್ಟೆಲ್ ನಲ್ಲಿ ವಾಸವಿದ್ದ. ಆ ವೇಳೆ ಹಾಸ್ಟೆಲ್ ನಲ್ಲಿ ಊಟದ ವ್ಯವಸ್ಥೆ ಹಾಗೂ ನೀರಿನ ವ್ಯವಸ್ಥೆ ಸರಿಯಿಲ್ಲವೆಂದು ಪ್ರತಿಭಟನೆ ನಡೆಸಿದ್ದಾನೆ. ಇದಕ್ಕೆ ಅವನಿಗೆ ಇನ್ನೂ ಕೆಲ ವಿದ್ಯಾರ್ಥಿಗಳು ಸಾಥ್ನೀಡಿದ್ದಾರೆ. ಈ ವಿಚಾರವಾಗಿ ಕಾಲೇಜು ಆಡಳಿತ ಮೃತ ಶಿಹರ್ಷ ಸೇರಿ ಇಪ್ಪತ್ತು ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಿದೆ.
ಈ ನಡುವೆ ಕಾಲೇಜಿನಿಂದ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಭಾಗವಹಿಸಿದ್ದ ಶ್ರೀಹರ್ಷ ಕಂಪನಿಯೊಂದಕ್ಕೆ ಆಯ್ಕೆಯಾಗಿದ್ದಾನೆ. ಕಂಪನಿಯು ಕಾಲೇಜಿನ ವಿಳಾಸಕ್ಕೆ ಆಫರ್ ಲೆಟರ್ ಕಳಿಸಿದೆ. ಆದರೆ ಪ್ರಾಂಶುಪಾಲರು ಮಾತ್ರ "ನೀನು ಸಪ್ಸೆಂಡ್ ಆಗಿರುವವನು" ಎಂದು ಹೇಳಿ ಆತನ ಆಫರ್ ಲೆಟರ್ ಹರಿದಿದ್ದಾರೆ. ವಿದ್ಯಾರ್ಥಿ ಶ್ರೀಹರ್ಷ "ಇದು ನನ್ನ ಭವಿಷ್ಯದ ವಿಚಾರ" ಎಂದು ಎಷ್ಟೇ ಗೋಗೆರೆದರೂ ಪ್ರಾಂಶುಪಾಲರು ಸೂಕ್ತ ಕಾಳಜಿ ತೋರಲಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣ ಪೋಲೀಸರು ತನಿಖೆ ನಡೆಸಿದ್ದಾರೆ.
Advertisement