ಬೆಂಗಳೂರು: ಹಾಲು ಉಹತ್ಪನ್ನಗಳ ಆಮದು ಮಾಡಿಕೊಳ್ಳುವುದರಿಂದ ರಾಜ್ಯದ ಹೈನುಗಾರಿಕೆ ವಲಯದ ಮೇಲೆ ಗಂಭೀರ ಪರಿಣಾಮ ಬೀರಲಿರುವ ಹಿನ್ನೆಲೆಯಲ್ಲಿ ಆಮದು ನಿರ್ಧಾರದಿಂದ ಹಿಂದೆ ಸರಿಯುವಂತೆ ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ನಗರದ ಜಿಕೆವಿಕೆಯಲ್ಲಿ ಶುಕ್ರವಾರ ಕೃಷಿ ಮೇಳದಲ್ಲಿ ಮಾತನಾಡಿದ ಅವರು, ಹಾಲು ಆಮದು ಮಾಡಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿಯುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಸಲಾಗಿದೆ. ರಾಜ್ಯದ 28 ಸಂಸತ್ ಸದಸ್ಯರು. ಪ್ರಧಾನಿ ಹಾಗೂ ಕೇಂದ್ರದ ಕೃಷಿ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗುವುದು. ಸಿ.ಆರ್.ಸಿ.ಇ.ಪಿ ಕಾಯಿದೆ ಜಾರಿ ಬಗ್ಗೆ ರಾಜ್ಯದ ರೈತರು ಭಯ ಪಡುವ ಅವಶ್ಯಕತೆಯಿಲ್ಲ. ಕೇಂದ್ರದ ಮೇಲೆ ಕಾಯಿದೆ ಜಾರಿಯಾಗದಂತೆ ಒತ್ತಡ ಹೇರುವ ಮೂಲಕ ಯಶಸ್ವಿಯಾಗಲಿದ್ದೇವೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.
ಯಾವುದೇ ಸರ್ಕಾರಗಳಿದ್ದರೂ ಅವು ರೈತರ ಪರವಾಗಿ ಇದ್ದು, ರೈತರ ಬದುಕು ಹಸನುಗೊಳಿಸಲು ಕಾರ್ಯಕ್ರಮ ರೂಪಿಸಬೇಕು. ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ, ಹೊಲಕ್ಕೆ ನೀರು, ಪ್ರೋತ್ಸಾಹ ಸಿಕ್ಕಾಗ ಮಾತ್ರ ಕೃಷಿ ಅಭಿವೃದ್ಧಿ ಸಾಧ್ಯವಾಗುತ್ತದೆ.ನಮ್ಮಲ್ಲಿ ನೀರಾವರಿ ಬೇಸಾಯ ಶೇ. 35 ಮಾತ್ರ ಇದ್ದು, ಬಹುಪಾಲು ಒಣಬೇಸಾಯ ಕ್ಷೇತ್ರವನ್ನು ಹೊಂದಿದೆ. ಯುವಕರು ಕೃಷಿಯಿಂದ ವಿಮುಖರಾಗಿ ಹಳ್ಳಿಯಿಂದ ನಗರಕ್ಕೆ ಉದ್ಯೋಗಕ್ಕಾಗಿ ವಲಸೆ ಬರುತ್ತಿದ್ದಾರೆ, ಇದನ್ನು ತಪ್ಪಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್ ಯೋಜನೆಯಡಿ ಎರಡು ಸಾವಿರ ಹಣವನ್ನು ರೈತರಿಗೆ ನೀಡುತ್ತಿದ್ದು, ಇದರ ಜತೆಗೆ ರಾಜ್ಯದಿಂದಲೂ ಎರಡೂ ಸಾವಿರ ಹಣವನ್ನು ಮೊದಲ ಕಂತಿನ ರೂಪದಲ್ಲಿ ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಪ್ರಕೃತಿ ವಿಕೋಪದಿಂದ ಸೂರು ಕಳೆದುಕೊಂಡರೆ ಮನೆ ನಿರ್ಮಿಸಲು ಸರ್ಕಾರದಿಂದ 95 ಸಾವಿರ ರೂ ನೀಡಲು ಅವಕಾಶವಿದೆ. ಆದರೂ ನಮ್ಮ ಸರ್ಕಾರ ಮನೆ ನಿರ್ಮಾಣಕ್ಕೆ ಸರ್ಕಾರ ೫ ಲಕ್ಷ ರೂ.ನೀಡುತ್ತಿದೆ ಎಂದು ಯಡಿಯೂರಪ್ಪ ಹೇಳಿದರು.
ರಾಜ್ಯದಲ್ಲಿ ಮತ್ತೆ ಅತಿವೃಷ್ಟಿ ತಲೆದೋರಿದ್ದು ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ಈಗಾಗಲೇ ವೀಡಿಯೋ ಸಂವಾದ ನಡೆಸಿ ಚರ್ಚಿಸಲಾಗಿದೆ. ಕೃಷಿ ಕಾರ್ಮಿಕರ ಸಮಸ್ಯೆ ನಿವಾರಿಸಲು ಕೃಷಿ ಯಂತ್ರೋಪಕರಣಗಳನ್ನು ಪರಿಚಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಬರುವ 2020 ರೊಳಗಾಗಿ ರೈತರ ಕೃಷಿ ಆದಾಯ ದುಪ್ಪಟ್ಟು ಮಾಡುವಂತೆ ಸೂಚಿಸಿದ್ದಾರೆ ಎಂದರು.
ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಆಹಾರದಲ್ಲಿ ಶೇ.45 ರಷ್ಟು ಪೋಲಾಗುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಹಸಿವಿನ ಸೂಚ್ಯಂಕದಲ್ಲಿ ಭಾರತ 102 ನೇ ಸ್ಥಾನದಲ್ಲಿದ್ದು, ಕೃಷಿಯಿಂದ ದೂರ ಸರಿಯುತ್ತಿರುವ ಯುವಕರನ್ನು ಕೃಷಿಯತ್ತ ಆಕರ್ಷಿಸಲು ಕ್ರಮ ಜರುಗಿಸಲಾಗತ್ತಿದೆ. ಇಡೀ ವಿಶ್ವವನ್ನು ಆವರಿಸಿರುವ ಭೂಮಿಯಲ್ಲಿ ಮಾನವ ಕೈಗೊಂಡ ಮೊದಲ ಉದ್ಯೋಗ ಕೃಷಿ. ನಿಖರ ಕೃಷಿ ಸುಸ್ಥಿರ ಅಭಿವೃದ್ಧಿ ಹೆಸರಿನಲ್ಲಿ ಕೃಷಿಮೇಳ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಹೊರ ರಾಜ್ಯಗಳಿಗೆ ಹಾಲು ವಿತರಣೆಯಾಗಲು ಯಡಿಯೂರಪ್ಪನವರೇ ಕಾರಣ: ಡಿಸಿಎಂ ಸವದಿ
ಕೃಷಿಮೇಳಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಕೃಷಿ ಇಲಾಖೆ ಹೊಂದಿರುವ ಉಪಮುಖ್ಯಮಂತ್ರಿ ಲಕ್ಷ್ಮಣ್ ಸಂಗಪ್ಪ ಸವದಿ ಚಾಲನೆ ನೀಡಿದರು. ಬಳಿಕ ಸವದಿ ಮಾತನಾಡಿ, ರಾಜ್ಯದ ಇತಿಹಾಸಲ್ಲಿ ಯಡಿಯೂರಪ್ಪ ರೈತರಿಗಾಗಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ್ದಾರೆ. ಸರ್ಕಾರದಲ್ಲಿ ಹಲವು ಸಮಸ್ಯೆಗಳಿವೆ ನಿಜ. ಬಡ್ಡಿರಹಿತ ಸಾಲ, ರೈತರ ಸ್ವಾಲಂಬಿ ಯೋಜನೆಗಳು, ಗ್ರಾಮೀಣ ಮಹಿಳೆಯರಿಗೆ ಹಾಲಿಗೆ ಪ್ರತಿಲೀಟರ್ ಗೆ ಐದು ರೂ.ಸಹಾಯಧನ ನೀಡಲಾಗುತ್ತಿದ್ದು, ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಹಾಲಿನ ಉತ್ಪಾದನೆ ಆಗುತ್ತಿರುವುದಕ್ಕೆ ಹಾಗೂ ಹೊರ ರಾಜ್ಯಗಳಿಗೆ ಹಾಲು ವಿತರಣೆಯಾಗಲು ಯಡಿಯೂರಪ್ಪ ಅವರೇ ಕಾರಣ. ಹಿಂದೆ ಅವರು ಹಾಲು ಉತ್ಪಾದನೆಗೆ ಎರಡು ರೂ.ಸಹಾಯಧನ ನೀಡಿರುವುದೇ ಕಾರಣ. ಭಾರತದಲ್ಲಿ ಹಾಲಿನ ಉತ್ಪಾದನೆಯಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ ಎಂದರು.
ಯಡಿಯೂರಪ್ಪ ಸರ್ಕಾರ ಬಂದ ಮೇಲೆ ಅತಿವೃಷ್ಟಿ ಅನಾವೃಷ್ಟಿ ತಲೆದೋರಿದೆ. ಸಮಸ್ಯೆಯನ್ನು ಸಮರ್ಪಕವಾಗಿ ಯಡಿಯೂರಪ್ಪ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ನೆರೆಯಲ್ಲಿ ನಷ್ಟ ಅನುಭವಿಸಿದ ಸಂತ್ರಸ್ತರಿಗೆ ಕೇಂದ್ರದ ಎನ್.ಡಿ.ಆರ್.ಎಫ್ ನಿಯಮಗಳನ್ನೂ ಮೀರಿ ಸಹಾಯ ನೀಡಲಾಗಿದೆ. ಪ್ರತಿಹೆಕ್ಟೇರ್ ಗೆ 10 ಸಾವಿರ ಹೆಚ್ಚುವರಿ ರೂ.ಹಾನಿಯಾದ ಮನೆಗಳಿಗೆ 50 , ಸಾವಿರದಿಂದ ಒಂದು ಲಕ್ಷ ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ಸಹಾಯಧನ ನೀಡುತ್ತಿದೆ ಎಂದರು.
ಕೇವಲ ರಸಗೊಬ್ಬರ, ಕ್ರಿಮಿನಾಶಕ ಬಳಸುವುದು ಯೋಗ್ಯವಲ್ಲ. ಇದರಿಂದ ಆರೋಗ್ಯ ಸಮಸ್ಯೆಯೂ ಹೆಚ್ಚುತ್ತಿದೆ. ರೈತರ ಆದಾಯ ಹೆಚ್ಚಳದೊಂದಿಗೆ ಆರೋಗ್ಯವೂ ಮುಖ್ಯ. ಆಹಾರಪದ್ಧತಿ ಬದಲಾವಣೆಯಿಂದ ರೋಗಗ್ರಸ್ತ ಸಮಾಜ ನಿರ್ಮಾಣವಾಗಿದ್ದು, ಹೀಗಾಗಿ ಸಾವಯವ ಕೃಷಿಗೆ ಹೆಚ್ಚು ಮಹತ್ವ ನೀಡಬೇಕಿದೆ. ಸಾವಯವ ಕೃಷಿಗೆ ವಿಶ್ವವಿದ್ಯಾಲಯ ಹೆಚ್ಚು ಆದ್ಯತೆ ನೀಡಲಿದೆ ಎಂದರು.
ಆರ್.ಸಿ.ಇ.ಪಿ ಕಾಯಿದೆಯನ್ನು ಕೈಬಿಡಬೇಕು: ಕೃಷ್ಣಬೈರೇಗೌಡ
ಮಾಜಿ ಕೃಷಿ ಸಚಿವ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೃಷ್ಣಬೈರೇಗೌಡ ಮಾತನಾಡಿ, ಕೇಂದ್ರದ ಆರ್.ಸಿ.ಇ.ಪಿ ಕಾಯಿದೆಯನ್ನು ಕೈಬಿಡಬೇಕು. ಹೊರದೇಶದ ಹಾಲು ಉತ್ಪನ್ನಗಳು ದೇಶಕ್ಕೆ ಬಂದರೆ ರಾಜ್ಯದ ರೈತರ ಜೀವನ ದುಃಸ್ಥಿತಿಯಾಗಲಿದೆ. ಹಾಲು ಉತ್ಪಾದನೆ ಗ್ರಾಮೀಣ ಜನರ ಜೀವನ ಎತ್ತಿಹಿಡಿದಿದೆ. ರೈತರ ಬಗ್ಗೆ ಕಾಳಜಿ ಇರುವ ಯಡಿಯೂರಪ್ಪ ಆರ್.ಸಿ.ಇ.ಪಿ ಕಾಯಿದೆ ಕಾಯಿದೆ ಜಾರಿ ಆಗದಂತೆ ಕೇಂದ್ರದ ಮೇಲೆ ಒತ್ತಡ ಹಾಗೂ ಪ್ರಭಾವ ಬೀರಬೇಕು. ಕಾಯಿದೆ ಜಾರಿಯಿಂದ ರೈತರ ಬದುಕಿಗೆ ಬರೆ ಎಳೆದಂತಾಗಲಿದೆ ಎಂಬುದನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಹಾಲು ಉತ್ಪಾದನೆ ನಿಜವಾಗಿ ರೈತ ಕುಟುಂಬಗಳನ್ನು ಸಾಕುತ್ತಿದೆ. ಬೆಳೆ ಕೃಷಿಯಲ್ಲಿ ಅನಿಶ್ಚಿತತೆ ಇದೆ.ಅನಿಶ್ಚಿತತೆಯಲ್ಲಿಯೂ ರೈತರಿಗೆ ಕಲ್ಪವೃಕ್ಷ ಕಾಮಧೇನು ಆಗಿರುವುದು ಹೈನುಗಾರಿಕೆ.ಹೈನುಗಾರಿಕೆ ಲಾಭದಾಯಕ ಉದ್ಯೋವಾಗಿದ್ದು, ನಗರದ ವಿದ್ಯಾವಂತರೂ ಕೂಡ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಮುಂದಾಗಿದ್ದಾರೆ. ಹೀಗಾಗಿ ಹಿಂದೆ ಹೈನುಗಾರಿಕೆ ಪ್ರೋತ್ಸಾಹ ಧನ ನೀಡಿದಂತೆ ಆರ್.ಸಿ.ಇ.ಪಿ ಕಾಯಿದೆಯನ್ನು ವಿರೋಧಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಸರ್ಕಾರಕ್ಕೆ ಕೃಷ್ಣಬೈರೇಗೌಡ ಮನವಿ ಮಾಡಿದರು.
ಹೊಸತಂತ್ರಜ್ಞಾನ ಕೃಷಿ ವಿಚಾರಗಳನ್ನು ರೈತರಿಗೆ ನೇರವಾಗಿ ತಲುಪಿಸುವ ಕೆಲಸ ಕೃಷಿ ಮೇಳಮಾಡುತ್ತಿದೆ. ಆ ಮೂಲಕ ವಿಜ್ಞಾನಿಗಳು ಹಾಗೂ ರೈತರ ಮಧ್ಯೆ ನೇರ ಸಂಪರ್ಕ ಕಲ್ಪಿಸುವ ಕೆಲಸವನ್ನು ಕೃಷಿ ವಿಶ್ವವಿದ್ಯಾಲಯ ಮಾಡುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತೊಂದು ಕಡೆ ಬರಗಾಲದ ನಡುವೆ ರೈತರ ಬದುಕು ಹಲವು ಸವಾಲುಗಳಿಂದ ಕೂಡಿದೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ರೈತರ ಹಾಗೂ ಜನರ ಆದಾಯ ಕಡಿಮೆಯಾಗಿದೆ ಎಂದು ಎನ್.ಎಸ್.ಎಸ್.ಓ ಸಮೀಕ್ಷೆ ಹೇಳಿದೆ. ಹೊಸಹೊಸ ತಂತ್ರಜ್ಞಾನಗಳ ಮೂಲಕ ರೈತರ ಬದುಕು ಹಸನು ಮಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ.ರಾಜೇಂದ್ರ ಪ್ರಸಾದ್ ಪ್ರಾಸ್ತವಿಕವಾಗಿ ಮಾತನಾಡಿ, ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆ ಕ್ಷೇತ್ರದಲ್ಲಿ ವಿಶ್ವವಿದ್ಯಾಲಯ ಮುಂಚೂಣಿಯಲ್ಲಿದೆ. ಆರು ಸುಧಾರಿತ ತಳಿ , 18 ಹೊಸ ತಂತ್ರಜ್ಞಾನ ಆವಿಷ್ಕಾರಗಳಿಂದಾಗಿ ರಾಷ್ಟ್ರಮಟ್ಟದಲ್ಲಿಯೂ ಹೆಸರು ಪಡೆದಿದೆ. ವಿಶ್ವವಿದ್ಯಾಲಯದ ಸೂರ್ಯಕಾಂತಿ ಆವಿಷ್ಕಾರ ತಳಿಯೊಂದು ವಿಶ್ವದಲ್ಲಿ ಹೆಸರು ಪಡೆದಿದೆ ಎಂದು ವಿಶ್ವವಿದ್ಯಾಲಯದ ಸಾಧನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ವಿಶ್ವವಿದ್ಯಾಲಯಕ್ಕೆ ಗ್ರಾಮೀಣ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚುತ್ತಿದ್ದು, ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಮುಂದಾಗುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವೇದಿಕೆಯಲ್ಲಿ ವಿಶ್ವವಿದ್ಯಾಲಯದಿಂದ ಡಾ.ಎಂ.ಹೆಚ್.ಮರಿಗೌಡ(ಅತ್ಯುತ್ತಮ ತೋಟಗಾರಿಕೆ) ರಮೇಶ್ ಜಿ , ಕುಮಾರಸ್ವಾಮಿ ಹೆಚ್.ಕೆ. ಅವರಿಗೆ ಡಾ. ದ್ವಾರಕೀನಾಥ್ (ಅತ್ಯುತ್ತಮ ರೈತ)ಸವಿತಾ ಮಂಗಾನವರ ಅವರಿಗೆ (ಡಾ.ದ್ವಾರಕೀನಾಥ್ ಅತ್ತುತ್ತಮವಿಸ್ತರಣಾ ಕಾರ್ಯಕರ್ತೆ)ರಾಜ್ಯಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಕೃಷಿ ಸಾಧಕರ ಕುರಿತು, ಆಧುನಿಕ ಬೇಸಾಯ ಕುರಿತಾದ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
Advertisement