ಬಂಡಿಪುರ: ಒಂಟಿ ಸಲಗ ಸೆರೆ ಕಾರ್ಯಾಚರಣೆ ಆರಂಭ

ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶಿವಪುರ ಹಂಗಳ ಗ್ರಾಮಗಳಲ್ಲಿ ರೈತರ ಜಮೀನಿಗೆ ಲಗ್ಗೆಯಿಟ್ಟು ಇಬ್ಬರ ಮೇಲೆ ದಾಳಿ ಮಾಡಿದ್ದ ಹಾಗೂ ಜಾನುವಾರುಗಳನ್ನು ಕೊಂದಿದ್ದ ಸಲಗವನ್ನು ಅರಣ್ಯ ಇಲಾಖೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶಿವಪುರ ಹಂಗಳ ಗ್ರಾಮಗಳಲ್ಲಿ ರೈತರ ಜಮೀನಿಗೆ ಲಗ್ಗೆಯಿಟ್ಟು ಇಬ್ಬರ ಮೇಲೆ ದಾಳಿ ಮಾಡಿದ್ದ ಹಾಗೂ ಜಾನುವಾರುಗಳನ್ನು ಕೊಂದಿದ್ದ ಸಲಗವನ್ನು ಅರಣ್ಯ ಇಲಾಖೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದೆ. 

ಸಲಗವನ್ನು ಸೆರೆಹಿಡಿದು ಸರ್ಕಾರಕ್ಕೆ ಕಳುಹಿಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಒಂಟಿ ಸಲಗ ತಮಿಳುನಾಡಿನಿಂದ ಬಂದಿರುವುದರಿಂದ ರಾಜ್ಯ ಆರಂಭಿಸಿರುವ ಕಾರ್ಯಾಚರಣೆಗೆ ನೆರವು ನೀಡುವಂತೆ ತಮಿಳುನಾಡು ರಾಜ್ಯದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು ಕೂಡ ಅವರು ನಿರಾಕರಿಸಿದ್ದಾರೆ ಎಂದು ಗೊತ್ತಾಗಿದೆ. 

ಜನರಿಗೆ ಉಪಟಳ ನೀಡುತ್ತಿದ್ದ ಈ ಆನೆಯನ್ನು ಅರಣ್ಯಕ್ಕೆ ಬಿಟ್ಟಿರುವ ತಮಿಳುನಾಡಿನ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮಕ್ಕೆ ರಾಜ್ಯದ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಉಪಟಳ ನೀಡುತ್ತಿರುವ ಗಂಡಾನೆ ಸೆರೆಹಿಡಿದು ಶಿಬಿರಕ್ಕೆ ಕಳುಹಿಸುವುದು ಉತ್ತಮವೆಂದು ಖ್ಯಾತ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರರವರು ಅಭಿಪ್ರಾಯಪಟ್ಟಿದ್ದಾರೆ.

ಹಾಗೆಯೇ ಉಪಟಳ ನೀಡುತ್ತಿದ್ದ ಆನೆಯನ್ನು ತಮಿಳುನಾಡಿನ ರಾಜ್ಯದ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಹಿಡಿದು ಮತ್ತೆ ಕಾಡಿಗೆ ಬಿಟ್ಟಿದ್ದೇ ತಪ್ಪು. ಹಾಗೆ ಬಿಟ್ಟರೆ ಅದು ಸಾರ್ವಜನಿಕರಿಗೆ ತೊಂದರೆ ಕೊಡುವುದು ಖಚಿತವೆಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ತಿಳಿಸಿದ್ದಾರೆ.

ಸಾರ್ವಜನಿಕರ ಗಮನಕ್ಕೆ ಆನೆಯು ಕಂಡುಬಂದಲ್ಲಿ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಅವರು ಮನವಿ ಮಾಡಿದ್ದಾರೆ. ಈಚೆಗೆ ಹುಲಿ ಜೀವಂತ ಸೆರೆಯಲ್ಲಿ ಭಾಗವಹಿಸಿದ್ದ ಅಭಿಮನ್ಯು ಸೇರಿದಂತೆ 6 ಆನೆಗಳನ್ನು ಹಾಗೂ ಅರಣ್ಯ ಸಿಬ್ಬಂದಿಯನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವರದಿ: ಗೂಳಿಪುರ ನಂದೀಶ ಎಂ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com