ಕರ್ಣಂಗೇರಿ(ಕೊಡಗು): ಕಳೆದ 2018ರಲ್ಲಿ ಕೊಡಗಿನಲ್ಲಿ ಉಂಟಾಗಿದ್ದ ನೆರೆ ಹಾಗೂ ಭೂಕುಸಿತದಿಂದ ಮನೆ ಕಳೆದುಕೊಂಡಿದ್ದ 35 ಕುಟುಂಬಗಳಿಗೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಮನೆ ಕಿಲೀ ಕೈ ಹಸ್ತಾಂತರಿಸಿದರು.
ಸಚಿವ ಕೆ.ಎಸ್. ಈಶ್ವರಪ್ಪ ಸಮ್ಮುಖದಲ್ಲಿ ಕಿಲೀ ಕೈ ಸ್ವೀಕರಿಸಿದ ಸಂತ್ರಸ್ತರು ಸಂಭ್ರಮಪಟ್ಟರು. ದೀಪಾವಳಿಗೂ ಮೊದಲೇ 35 ಸಂತ್ರಸ್ತ ಕುಟುಂಬಗಳಲ್ಲಿ ಬೆಳಕು ಮೂಡಿದೆ. ಕರ್ಣಂಗೇರಿ, ಮದೆ, ಮಡಿಕೇರಿ ಹಾಗೂ ಮಾದಾಪುರದ 35 ಕುಟುಂಬಕ್ಕೆ ಕರ್ಣಂಗೇರಿಯಲ್ಲಿ ಮನೆ ನಿರ್ಮಿಸಲಾಗಿತ್ತು. ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿ ಮನೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.
ಎರಡು ಮಲಗುವ ಕೋಣೆಯುಳ್ಳ ಮನೆ ನಿರ್ಮಿಸಲಾಗಿದ್ದು, ಪ್ರತಿ ಮನೆಗೆ ರೂ 9.85 ಲಕ್ಷ ವೆಚ್ಚ ಮಾಡಲಾಗಿದೆ. ಮೊದಲ ಹಂತದಲ್ಲಿ ಪೂರ್ಣಗೊಂಡ ಕರ್ಣಂಗೇರಿಯ ಮನೆಗಳನ್ನು ಹಸ್ತಾಂತರ ಮಾಡಲಾಗಿದೆ.
ಇನ್ನು ಜಂಬೂರಿನಲ್ಲಿ 650, ಮದೆಯಲ್ಲಿ 80 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಮನೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮೂಲ ಸೌಲಭ್ಯ ಕಾಮಗಾರಿ ಪ್ರಗತಿಯಲ್ಲಿದೆ.
Advertisement