ಚಾಮರಾಜನಗರ: ಮಹಿಳಾ ಅಧಿಕಾರಿಯನ್ನು ನೀರಿನಲ್ಲಿ ಮುಳುಗಿಸಲು ಯತ್ನ
ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಚಿಕ್ಕರಂಗನಾಥಕೆರೆಯ ನೀರಿನಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೃಷಿ ಅಧಿಕಾರಿಯನ್ನು ಅಪರಿಚಿತ ವ್ಯಕ್ತಿಯೊಬ್ಬ ಮುಳುಗಿಸಲು ಯತ್ನಿಸುತ್ತಿದ್ದಾಗ ಸಾರ್ವಜನಿಕರು ಅಧಿಕಾರಿಯನ್ನು ರಕ್ಷಿಸಿದ್ದಾರೆ.
Published: 28th October 2019 12:03 PM | Last Updated: 28th October 2019 12:46 PM | A+A A-

ಸಾಂದರ್ಭಿಕ ಚಿತ್ರ
ಚಾಮರಾಜನಗರ : ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಚಿಕ್ಕರಂಗನಾಥಕೆರೆಯ ನೀರಿನಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೃಷಿ ಅಧಿಕಾರಿಯನ್ನು ಅಪರಿಚಿತ ವ್ಯಕ್ತಿಯೊಬ್ಬ ಮುಳುಗಿಸಲು ಯತ್ನಿಸುತ್ತಿದ್ದಾಗ ಸಾರ್ವಜನಿಕರು ಅಧಿಕಾರಿಯನ್ನು ರಕ್ಷಿಸಿದ್ದಾರೆ.
ತಾಲೂಕಿನ ಲೊಕ್ಕನಹಳ್ಳಿ ಹೋಬಳಿಯ ಕೃಷಿ ಇಲಾಖೆಯ ರೈತ ಸಂಪರ್ಕ ಮಹಿಳಾ ಕೃಷಿ ಅಧಿಕಾರಿಯನ್ನು ಮೈಸೂರಿನ ಸಿದ್ದಲಿಂಗಪುರ ನಿವಾಸಿ ಖಾಸಗಿ ಬಸ್ ಕ್ಲೀನರ್ ಕಾರ್ತಿಕ್ ಪಟ್ಟಣದ ಚಿಕ್ಕರಂಗನಾಥ ಕೆರೆಯ ನೀರಿಗೆ ಮುಳುಗಿಸುತ್ತಿದ್ದ ವೇಳೆ ಚೀರಾಡುತ್ತಿದ್ದ ಅಧಿಕಾರಿಯನ್ನು ಸಾರ್ವಜನಿಕರು ರಕ್ಷಣೆ ಮಾಡಿ ಪೊಲೀಸರ ವಶಕ್ಕೆ ನೀಡಿದರು.
ಘಟನೆಯ ವಿವರ : ಚಾಮರಾಜನಗರ ನ್ಯಾಯಾಲಯದ ಶಿರಸ್ತೇದಾರ್ ನಂಜುಂಡಪ್ಪ ಅವರು ಪಟ್ಟಣದ ವಿದ್ಯಾನಗರದಲ್ಲಿ ಪೊಲೀಸ್ ವಸತಿಗೃಹ ಮುಂದೆ ಇರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರನ್ನು ಹಿಡಿದುಕೊಳ್ಳಲು ಇಬ್ಬರು ಮಕ್ಕಳ ಜೊತೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಘಟನೆ ನಡೆದಿದೆ . ಜೆಎಸ್ಎಸ್ ಬಳಿ ಇರುವ ಸೇತುವೆ ಸಮೀಪದಲ್ಲಿ ಮಹಿಳೆ ಚೀರಾಟ ಶಬ್ದ ಕೇಳಿ ತಕ್ಷಣವೇ ನಂಜುಂಡಪ್ಪ ಅವರು ಬೈಕ್ ಅನ್ನು ನಿಲ್ಲಿಸಿ ಕೆರೆ ಕಡೆ ನೋಡಿದ್ದಾರೆ.
ಈ ವೇಳೆ ಮಹಿಳೆಯನ್ನು ಬಿಟ್ಟು ಪರಾರಿಯಾಗಲು ಯತ್ನಿಸಿದ ಅಪರಿಚಿತನನ್ನು ಸಾರ್ವಜನಿಕರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಶೋಕ್, ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಾಂತ್ ಪಟ್ಟಣ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ರಾಜೇಂದ್ರ ಅವರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಈ ವೇಳೆ ನಾನು ಮೈಸೂರಿನ ಸಿದ್ದಲಿಂಗಪುರ ಎಂದು ತಿಳಿಸಿದ್ದಾನೆ. ಆರೋಪಿಯು ಪಾನಮತ್ತನಾಗಿ ರುವುದರಿಂದ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಗಾಗಿ ಕ್ರಮ ಕೈಗೊಂಡಿದ್ದಾರೆ.
ವರದಿ: ಗೂಳಿಪುರ ನಂದೀಶ್