ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಸಿನಿಮಾಗಳಿಗೆ ಪ್ರಧಾನ ಸಮಯ ಕೊಡಿ: ಸಿಎಂಗೆ ಕೆಎಫ್ ಸಿಸಿ ಒತ್ತಾಯ 

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಹಲವು ಸದಸ್ಯರು, ಹಿರಿಯ ಕಲಾವಿದರು ಮತ್ತು ಚಿತ್ರ ನಿರ್ಮಾಪಕರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಮಲ್ಟಿಪ್ಲೆಕ್ಸ್ ಗಳಲ್ಲಿ ದಿನದ ಪ್ರಧಾನ ಸಮಯಗಳಲ್ಲಿ ಕನ್ನಡ ಸಿನಿಮಾಗಳ ಪ್ರದರ್ಶನಕ್ಕೆ ಆದೇಶ ನೀಡುವಂತೆ ಮನವಿ ಸಲ್ಲಿಸಿದರು. 
ಕೆಎಫ್ ಸಿಸಿ ಸದಸ್ಯರು ಮುಖ್ಯಮಂತ್ರಿಗಳೊಂದಿಗೆ ಸಭೆಯಲ್ಲಿ
ಕೆಎಫ್ ಸಿಸಿ ಸದಸ್ಯರು ಮುಖ್ಯಮಂತ್ರಿಗಳೊಂದಿಗೆ ಸಭೆಯಲ್ಲಿ

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಹಲವು ಸದಸ್ಯರು, ಹಿರಿಯ ಕಲಾವಿದರು ಮತ್ತು ಚಿತ್ರ ನಿರ್ಮಾಪಕರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಮಲ್ಟಿಪ್ಲೆಕ್ಸ್ ಗಳಲ್ಲಿ ದಿನದ ಪ್ರಧಾನ ಸಮಯಗಳಲ್ಲಿ ಕನ್ನಡ ಸಿನಿಮಾಗಳ ಪ್ರದರ್ಶನಕ್ಕೆ ಆದೇಶ ನೀಡುವಂತೆ ಮನವಿ ಸಲ್ಲಿಸಿದರು.


ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿಆರ್ ಜಯರಾಜ್, ಮಾಜಿ ಅಧ್ಯಕ್ಷ ಚಿನ್ನೇಗೌಡ, ನಟ ದೊಡ್ಡಣ್ಣ, ನಿರ್ದೇಶಕ ರಾಕ್ ಲೈನ್ ವೆಂಕಟೇಶ್ ಮತ್ತು ಇತರ ಕಲಾವಿದರು ನಿಯೋಗದಲ್ಲಿದ್ದರು.


ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಚಿನ್ನೇಗೌಡ, ಮುಖ್ಯಮಂತ್ರಿಗಳೊಂದಿಗೆ ಸುಮಾರು 1 ಗಂಟೆ ಮಾತುಕತೆ ನಡೆಸಿದ್ದು ನಮ್ಮ ಬೇಡಿಕೆಗಳು ಮತ್ತು ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಆಲಿಸಿದ್ದಾರೆ. ಈಗ ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರಮುಖ ಸಮಯಗಳನ್ನು ಕನ್ನಡೇತರ ಚಿತ್ರಗಳಿಗೆ ನೀಡುತ್ತಿದ್ದಾರೆ. ಬೇರೆಲ್ಲಾ ರಾಜ್ಯಗಳಲ್ಲಿ ಆಯಾ ಸ್ಥಳೀಯ ಭಾಷೆಗಳ ಚಿತ್ರಗಳಿಗೆ ನೀಡಲಾಗುತ್ತಿದೆ. ಇದೇ ರೀತಿ ನಮ್ಮ ರಾಜ್ಯದಲ್ಲಿ ಕೂಡ ಬರಬೇಕು ಎಂದರು.


ಸಭೆಯಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸ್ಥಳದ ಬಗ್ಗೆ ಕೂಡ ಚರ್ಚೆ ನಡೆಸಲಾಯಿತು. ಫಿಲ್ಮ್ ಸಿಟಿ ನಿರ್ಮಾಣದ ಬಗ್ಗೆ ಹಿಂದಿನ ಮುಖ್ಯಮಂತ್ರಿಗಳಲ್ಲಿ ಮೈಸೂರು, ರಾಮನಗರ ಎಂಬ ಗೊಂದಲಗಳಿದ್ದವು. ಈಗಿನ ಸಿಎಂ ಯಡಿಯೂರಪ್ಪ ಕನಕಪುರ ರಸ್ತೆಯಲ್ಲಿ ಎಂದು ಹೇಳುತ್ತಿದ್ದಾರೆ. ನಾವು ಮೈಸೂರಲ್ಲಿ ಮಾಡಿ ಎಂದು ಕೇಳುತ್ತಿದ್ದೇವೆ. ಅದನ್ನು ತಮ್ಮ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಸಿಎಂ ಹೇಳಿದ್ದಾರೆ ಎಂದರು.


ಇದೇ ವೇಳೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರು, ಚಿತ್ರ ನಿರ್ದೇಶಕರು, ನಿರ್ಮಾಪಕರು ಹಾಗೂ ಇತರರಿಗೆ ಮನೆ ಒದಗಿಸಿಕೊಡುವಂತೆ ಕೇಳಿದ್ದಾರೆ. ಬಿಡಿಎ ಫ್ಲಾಟ್ ಗಳನ್ನು ಕೈಗೆಟಕುವ ದರದಲ್ಲಿ ನೀಡಬಹುದು ಎಂದಿದ್ದಾರೆ.


ಡಾ ರಾಜ್ ಕುಮಾರ್ ಸಮಾಧಿಯ ಅಭಿವೃದ್ಧಿಗೆ 10 ಕೋಟಿ ರೂಪಾಯಿ ನೀಡಲು ಮತ್ತು ಅಂಬರೀಷ್ ಹೆಸರಿನಲ್ಲಿ ಟ್ರಸ್ಟ್ ಕೂಡ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ರಾಕ್ ಲೈನ್ ವೆಂಕಟೇಶ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com