ಶಿವಮೊಗ್ಗ: ಚಿಕ್ಕಮಗಳೂರಿನ ಇಬ್ಬರು ಶಂಕಿತ ನಕ್ಸಲೀಯರು ಕೇರಳದ ಪಾಲಕ್ಕಡ್ ಅರಣ್ಯ ಪ್ರದೇಶದಲ್ಲಿ ಇಂದು ನಡೆದ ಪೊಲೀಸ್ ಎನ್ ಕೌಂಟರ್ ನಲ್ಲಿ ಹತ್ಯೆಯಾಗಿರುವುದು ದೃಢಪಟ್ಟಿದೆ.ಅಂಗಡಿ ಸುರೇಶ್ (40 ) ಹಾಗೂ ಶ್ರೀಮತಿ (40) ಎನ್ ಕೌಂಟರ್ ನಲ್ಲಿ ಮೃತಪಟ್ಟ ಶಂಕಿತ ನಕ್ಸಲೀಯರಾಗಿದ್ದಾರೆ.
ಮೂಡಿಗೇರಿ ತಾಲೂಕಿನ ಗೋಣಿಬೀಡು ಗ್ರಾಮದ ಸುರೇಶ್ 2004ರಲ್ಲಿ ನಕ್ಸಲ್ ಗುಂಪು ಸೇರಿದ್ದರೆ, ಶೃಂಗೇರಿಯ ಶ್ರೀಮತಿ 2008ರಲ್ಲಿ ನಕ್ಸಲೀಯರ ಗುಂಪಿಗೆ ಮರು ಸೇರ್ಪಡೆಯಾಗಿದ್ದರು ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರಸ್ ಗೆ ತಿಳಿಸಿದ್ದಾರೆ.
ಪೊಲೀಸ್ ಮಾಹಿತಿದಾರ ಹತ್ಯೆ ಸೇರಿದಂತೆ ಸುರೇಶ್ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸುಮಾರು 20 ಪ್ರಕರಣಗಳು ದಾಖಲಾಗಿವೆ. ಸುರೇಶ್ ಹಾಗೂ ಶ್ರೀಮತಿ ಬಡ ಕುಟುಂಬದಿಂದ ಬಂದಿದ್ದು, ಉನ್ನತ ಶಿಕ್ಷಣ ಪಡೆದ ಬಳಿಕ ಮಾವೋವಾದಿಗಳೊಂದಿಗೆ ನಂಟು ಬೆಳೆಸಿಕೊಂಡಿದ್ದರು.
ಮೃತದೇಹಗಳ ಗುರುತಿಗಾಗಿ ಶಂಕಿತ ಮಾವೋವಾದಿಗಳ ಕುಟುಂಬ ಸದಸ್ಯರು ಕೇರಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
Advertisement