ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಕೊತ್ತಪಲ್ಲಿ ತಾಂಡಾದಿಂದ ನಾಪತ್ತೆಯಾಗಿದ್ದ ಐದು ಜನ ಶಾಲಾ ಮಕ್ಕಳು ಮುಂಬೈನಲ್ಲಿ ಪತ್ತೆಯಾಗಿದ್ದಾರೆ. ಮುಂಬೈನ ತಮ್ಮ ಪರಿಚಯಸ್ಥರು ಇರುವ ಅಲಿಭಾಗ ಎಂಬ ಪ್ರದೇಶದಲ್ಲಿ ಹೋಟೆಲ್ವೊಂದರಲ್ಲಿ ಕೆಲಸ ಕೇಳಲು ತೆರಳಿದಾಗ ಅನುಮಾನಗೊಂಡ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಮುಧೋಳ ಗ್ರಾಮದ ಸರಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಅಂಕುಶ ಗಣೇಶ ಜಾಧವ (14), ಜೇತಲಾ ಚಂದಾ ರಾಠೋಡ (14), ಜೀತು ಬನ್ಸಿಲಾಲಾ ರಾಠೋಡ (16), ಅರ್ಜುನ ಬಾಡು ರಾಠೋಡ (14), ರವೀಂದ್ರ ಹಣಮಂತ ರಾಠೋಡ (14) ಮಂಗಳವಾರ ನಾಪತ್ತೆಯಾಗಿದ್ದರು. ನಂತರ ಪ್ರಕರಣ ದಾಖಲಿಸಿಕೊಂಡಿದ್ದ ಮುಧೋಳ ಪೊಲೀಸರು ತನಿಖೆ ಕೈಗೊಂಡಿದ್ದರು.
ಮುಧೋಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ ಮಕ್ಕಳು ಹಾಸ್ಟೆಲ್ ಗೆ ಹೋಗುವುದಾಗಿ ಸುಳ್ಳು ಹೇಳಿ ಕೊಂತಪಲ್ಲಿ ತಾಂಡಾದಿಂದ ಮಂಗಳವಾರ ನಾಪತ್ತೆಯಾಗಿದ್ದರು.
ಪಿಐ ತಮ್ಮಾರಾಯ ಪಾಟೀಲ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಬೆಂಗಳೂರು ಮತ್ತು ಮುಂಬೈನಲ್ಲಿ ನಾಪತ್ತೆಯಾದ ಮಕ್ಕಳಿಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ನಾಪತ್ತೆಯಾದ ಮಕ್ಕಳು ಕೊನೆಗೂ ಮುಂಬೈನಲ್ಲಿ ಪತ್ತೆಯಾಗಿದ್ದಾರೆ.
Advertisement