ಕಾರವಾರ: ನಾಪತ್ತೆಯಾಗಿದ್ದ ಡಿವೈಎಸ್ಪಿ ಸುರಕ್ಷಿತವಾಗಿದ್ದಾರೆ, ಜಿಲ್ಲಾಧಿಕಾರಿಗಳಿಂದ ಸ್ಪಷ್ಟನೆ
ಕಾರವಾರ: ಭಾನುವಾರದಿಂದ ಕಾಣೆಯಾಗಿದ್ದ ಕಾರವಾರ ಡಿವೈಎಸ್ಪಿ ಶಂಕರ್ ಮಾರಿಯಾಳ್ ಹಾಗೂ ಇನ್ನೋರ್ವ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿ ರವೀಂದ್ರ ಸೋಮವಾರ ಬೆಳಿಗ್ಗೆ ಮೊಬೈಲ್ ಸಂಪರ್ಕಕ್ಕೆ ಸಿಕ್ಕಿದ್ದಾರೆಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಹೇಳಿದ್ದಾರೆ.
ನಾಪತ್ತೆಯಾಗಿರುವ ಇಬ್ಬರೂ ಅಧಿಕಾರಿಗಳು ಸುರಕ್ಷಿತವಾಗಿದ್ದಾರೆ ಎಂದಿರುವ ಜಿಲ್ಲಾಂಧಿಕಾರಿಗಳು ಡಿವೈಎಸ್ಪಿ ಹಾಗೂ ತಂಡ ಕಾಡಿನಲ್ಲಿ ಭೇಟಿಯಾಗಿದ್ದು, ಅವರನ್ನೀಗ ಸುರಕ್ಷಿತವಾಗಿ ಮರಳಿ ಕರೆತರಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಕರಣವೊಂದಕ್ಕೆ ಸಂಬಂಧಿಸಿ ಮಾಹಿತಿ ಕಲೆ ಹಾಕಲು ತೆರಳಿದ್ದ ಕಾರವಾರ ಡಿವೈಎಸ್ಪಿ ಶಂಕರ್ ಮಾರಿಯಾಳ್ ಸೇರಿ ಕೆಲ ಪೋಲೀಸ್ ಅಧಿಕಾರಿಗಳು ಕಾಳಿ ನದಿಯ ಅಂಚಿನ ಕಾಡಿನಲ್ಲಿ ನಾಪತ್ತೆಯಾಗಿರುವ ಘಟನೆ ಭಾನುವಾರ ರಾತ್ರಿ ನಡೆದಿದ್ದು ಅಧಿಕಾರಿಗಳ ಕುಟುಂಬದಲ್ಲಿ ಆತಂಕ ಮನೆ ಮಾಡಿತ್ತು..
ತನಿಖೆಯ ಸಂಬಂಧ ಕೆಲ ಸಿಬ್ಬಂದಿಗಳೊಡನೆ ವಾಹನದಲ್ಲಿ ಬಾರೆ ಗ್ರಾಮದ ಅರಣ್ಯ ಪ್ರದೇಶದಕ್ಕೆ ತೆರಳಿದ್ದ ಡಿವೈಎಸ್ಪಿ ಶಂಕರ್ ಮಾರಿಯಾಳ್ ಹಾಗೂ ತಂಡದ ಕೆಲ ಸದಸ್ಯರು ನಾಪತ್ತೆಯಾಗಿದ್ದಾರೆ. ಸ್ಥಳದಲ್ಲಿ ಮೊಬೈಲ್ ವಾಕಿ ಟಾಕಿ ಸಿಗ್ನಲ್ ಗಳೂ ಸಿಕ್ಕದ ಕಾರಣ ಮಲ್ಲಾಪುರ ಹಾಗೂ ಕದ್ರ ಪೋಲೀಸರು ಕೋಬಿಂಗ್ ನಡೆಸಿ ಶೋಧಕಾರ್ಯಾಚರಣೆ ನಡೆಸಿದ್ದರು.