ಬೆಂಗಳೂರು: ಒಂದು ದೇಶ -ಒಂದು ಚುನಾವಣೆ ವಿಚಾರ ಬಹಳ ಗಂಭೀರವಾಗಿದ್ದು, ಸಂವಿಧಾನದಲ್ಲಿ ತಿದ್ದುಪಡಿಗಳು ಸೇರಿದಂತೆ ಸರಿಯಾದ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕವಷ್ಟೇ ಅದನ್ನು ಕಾರ್ಯಗತಗೊಳಿಸಬಹುದಾಗಿದೆ ಎಂದು ಹೇಳುವ ಮೂಲಕ ಚುನಾವಣಾ ಆಯೋಗ ಪರೋಕ್ಷವಾಗಿ ಈ ಕಲ್ಪನೆಯನ್ನು ಬೆಂಬಲಿಸುವುದಾಗಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಸುನೀಲ್ ಅರೋರಾ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ವಿಶ್ವ ಚುನಾವಣಾ ಸಂಸ್ಥೆಗಳ ಸಂಘದ 4ನೇ ಸಾಮಾನ್ಯ ಸಭೆಯ ಸಮಾರೋಪ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವಿಎಂ ತಿರುಚಲು ಯಾರಿಗೂ ಸಾಧ್ಯವಿಲ್ಲ. ಅವುಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ. ಈ ಮತಯಂತ್ರಗಳ ಬಗ್ಗೆ ಯಾರೂ ಸಹ ಅನುಮಾನಿಸಬಾರದು ಎಂದರು.
ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ ಅಂತಿಮ ಪಟ್ಟಿಯಲ್ಲಿ ಹೆಸರು ಇಲ್ಲದವರು ಮೊದಲಿನಂತೆ ಮುಂದೆಯೂ ತಮ್ಮ ಹಕ್ಕನ್ನು ಹೊಂದಿರುತ್ತಾರೆ ಎಂದು ಕೇಂದ್ರ ಗೃಹಸಚಿವಾಲಯ ಈಗಾಗಲೇ ಸ್ಪಷ್ಟಪಡಿಸಿದ್ದು, ನ್ಯಾಯಮಂಡಳಿ ತೀರ್ಮಾನಿಸುವವರೆಗೂ ಎನ್ ಆರ್ ಸಿಯಿಂದ ಹೆಸರು ಕೈ ಬಿಟ್ಟವರು ಕೂಡಾ ಚುನಾವಣಾ ಸಮಯದಲ್ಲಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ ಎಂದು ಹೇಳಿದರು.
Advertisement