ರಾಯಚೂರು: ನೀರಿಗೆ ಬಿದ್ದ ತನ್ನ ಸ್ನೇಹಿತನನ್ನು ರಕ್ಷಣೆ ಮಾಡಲು ಹೋಗಿ ಸಿಂಧನೂರು ಮೂಲದ ಯುವಕನೊಬ್ಬ ಅಮೆರಿಕಾದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಶ್ರೀಪುರಂ ಜಂಕ್ಷನ್ ನಿವಾಸಿ ಅಜಯ್ ಕುಮಾರ್ (24) ಸಾವನ್ನಪ್ಪಿದ ಯುವಕನೆಂದು ಗುರ್ತಿಸಲಾಗಿದೆ.
ಮೃತ ಅಜಯ್ ಕುಮಾರ್ ಅವರು ಕಳೆದ 8 ತಿಂಗಳಿನಿಂದ ಅಮೆರಿಕಾದ ಟೆಕ್ಸಾಸ್ ನಲ್ಲಿದ್ದರು. ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದರು. ಸ್ನೇಹಿತರೊಂದಿಗೆ ಮಂಗಳವಾರ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಪ್ರವಾಸಕ್ಕೆಂದು ಅಮೆರಿಕಾದ ಟರ್ನರ್ ಫಾಲ್ಸ್'ಗೆ ತೆರಳಿದ್ದ ಸಂದರ್ಭದಲ್ಲಿ ಅಜಯ್ ಅವರ ಸ್ನೇಹಿತ ನೀರಿಗೆ ಬಿದ್ದಿದ್ದಾರೆ. ಈ ವೇಳೆ ಅವರನ್ನು ರಕ್ಷಣೆ ಮಾಡಲು ಹೋಗಿ ತಾವೂ ನೀರಿನಲ್ಲಿ ಬಿದ್ದಿದ್ದಾರೆ. ಈ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಜಯ್ ಮೃತದೇಹವನ್ನು ಭಾರತಕ್ಕೆ ತರಲು ಈಗಾಗಲೇ ಸಿದ್ಧತೆಗಳು ನಡೆಯುತ್ತಿದೆ. ಅಮೆರಿಕಾದಲ್ಲಿರುವ ತೆಲುಗು ಸಂಘಟನೆ ಟೆಕ್ಸಾಸ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಈಗಾಗಲೇ ಮಾತನಾಡಿದ್ದು, ಮೃತದೇಹ ಶನಿವಾರ ಭಾರತಕ್ಕೆ ರವಾನಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
Advertisement