ಕೊಪ್ಪಳ: ಪತಿಯ ಮೇಲಿನ ಕೋಪದ ಭರದಲ್ಲಿ ತಾಯಿಯೊಬ್ಬಳು ತಾನು ಹೆತ್ತ ಮಗುವನ್ನೇ ಕತ್ತು ಹಿಸುಕಿ ಅಮಾನುಷವಾಗಿ ಕೊಂದಿರುವ ಘಟನೆ ಕೊಪ್ಪಳದ ಕಾರಟಗಿ ತಾಲೂಕು ಸೋಮನಾಳ ಗ್ರಾಮದಲ್ಲಿ ನಡೆದಿದೆ.
ಅಭಿನವ ಕೊಲೆಗೀಡಾಗಿರುವ ಮಗುವಾಗಿದ್ದು ಕವಿತಾ ಅಲಿಯಾಸ್ ಪ್ರತಿಮಾ (24) ಆರೋಪಿ ತಾಯಿಯಾಗಿದ್ದಾಳೆ. ಕುಟುಂಬ ಕಲಹದ ಕಾರಣಕ್ಕೆ ಹದಿನಾರು ತಿಂಗಳ ಮಗುವನ್ನು ಕೊಂದ ಪ್ರತಿಮಾಳನ್ನು ಕಾರಟಗಿ ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ವಿವರ
ಕವಿತಾ ಅಲಿಯಾಸ್ ಪ್ರತಿಮಾ ನಾಲ್ಕು ವರ್ಷಗಳ ಹಿಂದೆ ಶಶಿಧರ್ ಎಂಬಾತನೊಡನೆ ವಿವಾಹವಾಗಿದ್ದಳು. ಕಳೆದ ಒಂದೂವರೆ ವರ್ಷದ ಹಿಂದೆ ದಂಪತಿಗಳಿಗೆ ಮಗುವು ಜನಿಸಿತ್ತು. ಇನ್ನು ಪತಿ ಶಶಿಧರ್ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದು ದುಡಿಮೆಯ ಹಣವನ್ನು ಮನೆಗೆ ನೀಡುತ್ತಿರಲಿಲ್ಲ. ಇದರಿಂದ ಬೇಸತ್ತಿದ್ದ ಪ್ರತಿಮಾ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿ ಬದುಕಿದ್ದಳು.
ಸೋಮವಾರ ಪತಿ ಕೆಲಸಕ್ಕೆ ತೆರಳಿದಾಗ ಮಗು ಅಭಿನವನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದು ಸಂಜೆಯವರೆಗೆ ಶವದೊಡನೆ ಮನೆಯಲ್ಲೇ ಇದ್ದಳು. ಸಂಜೆ ಪತಿ ಕೆಲಸ ಮುಗಿಸಿ ಮನೆಗೆ ಬಂದಾಗ ಮಗು ಸತ್ತಿರುವುದು ಕಂಡು ಆಘಾತಗೊಂಡಿದ್ದು ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣ ಆತ ಪೋಲೀಸರಿಗೆ ಮಾಹಿತಿ ನೀಡಿದ್ದು ಪೋಲೀಸರು ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Advertisement