ಕಂಪ್ಲಿ: ಮೊಹರಂ ಆಚರಣೆ ವೇಳೆ ಅಲಾಯಿ ಕುಣಿಯುತ್ತಿದ್ದ ಯುವಕ ಲಾಗ ಹೊಡೆಯುವ ಸಂದರ್ಭದಲ್ಲಿ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ಕೋಟೆ ಪ್ರದೇಶದಲ್ಲಿ ಮಂಗಳವಾರ ನಡೆದಿದೆ
ಕಂಪ್ಲಿಯ 18ನೇ ವಾರ್ಡ್ನ ತಳವಾರ ಓಣಿಯ ಉಪ್ಪಾರ ಕುಮಾರ್ (24 ವರ್ಷ) ಮೃತ ದುರ್ದೈವಿ. ಇವರು ಅಲಾಯಿ ಕುಣಿಯುತ್ತಿದ್ದ ಸಂದರ್ಭದಲ್ಲಿ ಲಾಗ ಹೊಡೆಯಲು ಪ್ರಯತ್ನಿಸಿದ್ದರು. ಆಗ ಅವರ ಕಾಲು ಅಲಂಕಾರಕ್ಕೆ ಅಳವಡಿಸಿದ್ದ ವಿದ್ಯುತ್ ದೀಪದ ತಂತಿಗೆ ತಗುಲಿದ್ದರಿಂದ ವಿದ್ಯುತ್ ಪ್ರವಹಿಸಿ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಂಪ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ ಶವವನ್ನು ಸಂಬಂಧಿಕರಿಗೆ ಒಪ್ಪಿಸಲಾಗಿದೆ. ಆಸ್ಪತ್ರೆ ಬಳಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಸರ್ಕಾರಿ ಆಸ್ಪತ್ರೆಗೆ ಶಾಸಕ ಜೆ.ಎನ್. ಗಣೇಶ್ ಭೇಟಿ ನೀಡಿ, ಮೃತನ ಕುಟುಂಬದವರನ್ನು ಸಾಂತ್ವನ ಹೇಳಿದರು. ಸಾಧ್ಯವಾಗುವ ರೀತಿಯಲ್ಲಿ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು. ಘಟನೆಗೆ ಸಂಬಂಧಿಸಿದಂತೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement