ಬೆಂಗಳೂರು: ಸಿಬ್ಬಂದಿಯ ಜನ್ಮದಿನಕ್ಕೆ ವಿಶೇಷ ಉಡುಗೊರೆ ನೀಡುವ ಮೂಲಕ ಪೊಲೀಸರ ಮುಖದಲ್ಲಿ ನಗರ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ಅವರು ಸಂತಸ ಮೂಡಿಸಿದ್ದಾರೆ.
ಪೊಲೀಸರು ಅತಿ ಒತ್ತಡದಲ್ಲಿ ಕಾರ್ಯನಿರ್ವಹಿಸುವುದರಿಂದ ಕುಟುಂಬಕ್ಕೆ ಹೆಚ್ಚು ಸಮಯ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕನಿಷ್ಠ ತಮ್ಮ ಹುಟ್ಟು ಹಬ್ಬಕ್ಕಾದರೂ ಕುಟುಂಬದೊಂದಿಗೆ ಖುಷಿಯಾಗಿ ಇದಲೆಂದು ವಿನೂತನ ಯೋಜನೆಯನ್ನು ರೂಪಿಸಿದ್ದಾರೆ. ಆಯುಕ್ತರು, ಅಧಿಕಾರಿಗಳು ಹಾಗೂ ಸಿಬ್ಬಂದಿಯ ಹುಟ್ಟುಹಬ್ಬದಂದು ಯಾವುದೇ ಕೆಲಸದ ಒತ್ತಡವಿದ್ದರೂ ಅವರಿಗೆ ರಜೆ ನೀಡಬೇಕು.ಅಲ್ಲದೇ, ಅವರಿಗೆ ಶುಭಾಶಯ ಪತ್ರ ಕಳಿಸುವಂತೆ ವಿಶೇಷ ಆದೇಶವೊಂದನ್ನು ಅವರು ಹೊರಡಿಸಿದ್ದಾರೆ.
ಹುಟ್ಟು ಹಬ್ಬದ ಶುಭಾಶಯ ಪತ್ರಗಳನ್ನು ಆಯಾ ಠಾಣೆಯ ಹಿರಿಯ/ಮೇಲುಸ್ತುವಾರಿ ಅಧಿಕಾರಿಗಳಿಗೆ ಖುದ್ದಾಗಿ ಠಾಣಾ/ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಗೆ ನೀಡಿ ಶುಭ ಕೋರಬೇಕು. ನಗರ ಪೊಲೀಸ್ ಘಟಕದ ಎಲ್ಲಾ ಸಿಬ್ಬಂದಿ ಕರ್ತವ್ಯದ ಒತ್ತಡದಿಂದ ಹೊರ ಬರಲು ಹಾಗೂ ಅವರ ಹುಟ್ಟು ಹಬ್ಬದ ದಿನದಂದು ಕುಟುಂಬದವರೊಂದಿಗೆ ಸಂತೋಷದಿಂದ ಸಮಯ ಕಳೆಯಲು ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ರಜೆ ಕೊಡಬೇಕು. ಎಎಸ್ಐ ಮತ್ತು ಮೇಲ್ಪಟ್ಟ ದರ್ಜೆಯ ಅಧಿಕಾರಿಗಳಿಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಅನುಮತಿಯ ರಜೆಯನ್ನು ಅವರ ಹುಟ್ಟು ಹಬ್ಬದ ದಿನದಂದು ನೀಡುವಂತೆ ಆಯುಕ್ತರು ಸೂಚಿಸಿದ್ದಾರೆ.
Advertisement