ಬೆಂಗಳೂರು: ರೌಡಿಶೀಟರ್ ಶ್ರೀಧರ್ ಅಲಿಯಾಸ್ ಓಣಿ ಶ್ರೀಧರ್ ಎಂಬಾತನ ಮೇಲೆ ಬೇಗೂರು ಪೊಲೀಸರು ಭಾನುವಾರ ತಡ ರಾತ್ರಿ ಗುಂಡು ಹಾರಿಸಿ ಬಂಧಿಸಿದ್ದಾರೆ.
ಬೊಮ್ಮನಹಳ್ಳಿಯ ಓಂ ಶಕ್ತಿ ಲೇಔಟ್ನಲ್ಲಿ ಆಗಸ್ಟ್ 30ರಂದು ಆಟೋ ಸುನೀಲ್ ಎಂಬಾತನ ಕೊಲೆಯಾಗಿತ್ತು, ಈ ಪ್ರಕರಣದಲ್ಲಿ ಶ್ರೀಧರ್ ಮತ್ತು ಸಹಚರರ ವಿರುದ್ಧ ಪ್ರಕರಣ ದಾಖಲಾಗಿತ್ತು, ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಿ, ಬಂಧನಕ್ಕೆ ಬಲೆ ಬೀಸಲಾಗಿತ್ತು.
ಬೇಗೂರಿನ ಕೊಪ್ಪ ಪ್ರದೇಶದಲ್ಲಿ ಶ್ರೀಧರ್ ಇರುವ ಖಚಿತ ಮಾಹಿತಿ ಪಡೆದ ಬೇಗೂರು ಇನ್ಸ್ಪೆಕ್ಟರ್ ಮಂಜುನಾಥ್ ಕಳೆದ ರಾತ್ರಿ ತಂಡದೊಂದಿಗೆ ಅಲ್ಲಿಗೆ ತೆರಳಿದ್ದಾರೆ. ಆರೋಪಿಯ ಬಂಧನಕ್ಕೆ ಮಂಜುನಾಥ್ ಅವರ ನೇತೃತ್ವದ ತಂಡ ಕಾರ್ಯಾಚರಣೆಗಿಳಿದಿದೆ. ಈ ವೇಳೆ ಶ್ರೀಧರ್, ಪೊಲೀಸ್ ಮುಖ್ಯಪೇದೆ ರಾಮಚಂದ್ರ ಅವರ ಮೇಲೆ ಲಾಂಗ್ನಿಂದ ಹಲ್ಲೆಗೆ ಮುಂದಾಗಿದ್ದಾನೆ. ತಕ್ಷಣವೇ ಇನ್ಸ್ ಪೆಕ್ಟರ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗೆ ಸೂಚಿಸಿದ್ದಾರೆ. ಆದರೆ ಆತ ಪೊಲೀಸರ ಮೇಲೆ ಮತ್ತೆ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಇನ್ಸ್ಪೆಕ್ಟರ್ ಮಂಜುನಾಥ್ ಅವರು ಆರೋಪಿ ಶ್ರೀಧರ್ ಕಾಲಿಗೆ ಗುಂಡು ಹಾರಿಸಿದ್ದಾರೆ.
ಪರಿಣಾಮ ಕುಸಿದು ಬಿದ್ದ ಶ್ರೀಧರ್ ನನ್ನು ಸುತ್ತುವರಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮುಖ್ಯಪೇದೇ ರಾಮಚಂದ್ರ ಅವರಿಗೂ ಗಾಯಗಳಾಗಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement