ಬೆಂಗಳೂರು: 2022ರ ಹೊತ್ತಿಗೆ ಭಾರತ 175 ಗಿಗಾವಾಟ್ ಶುದ್ಧ ಇಂಧನವನ್ನು ಉತ್ಪಾದಿಸುವ ಗುರಿ ಹೊಂದಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
2022ರ ವೇಳೆಗೆ ನಮ್ಮ ದೇಶದಲ್ಲಿ ಕನಿಷ್ಠ 175 ಗಿಗಾವಾಟ್ ನಷ್ಟು ಶುದ್ಧ ಇಂಧನ ಉತ್ಪಾದಿಸುವ ಗುರಿಯನ್ನಿಟ್ಟುಕೊಳ್ಳಬೇಕು, ಅವುಗಳಲ್ಲಿ 100 ಗಿಗಾವಾಟ್ ಇಂಧನವನ್ನು ಸೂರ್ಯನ ಬೆಳಕು ಮತ್ತು ಬೇರೆ ಮೂಲಗಳಿಂದ ಉತ್ಪಾದಿಸಬೇಕೆಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ ಎಂದರು.
ನಿನ್ನೆ ಬೆಂಗಳೂರಿನಲ್ಲಿ ರಾಷ್ಟ್ರೀಯ ಅಂತರಶಿಕ್ಷಣ ಇಂಧನ ಸಂಶೋಧನೆ ಕೇಂದ್ರ(ಎನ್ಐಸಿಇಆರ್) ಮತ್ತು ಬೆಂಗಳೂರಿನ ರಾಷ್ಟ್ರೀಯ ವಿಜ್ಞಾನ ಕೇಂದ್ರದಲ್ಲಿ(ಐಐಎಸ್ಸಿ) ರಾಷ್ಟ್ರೀಯ ಶುದ್ಧ ಕಲ್ಲಿದ್ದಲು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ(ಎನ್ ಸಿಸಿಆರ್ ಡಿಸಿ)ವನ್ನು ಉದ್ಘಾಟಿಸಿ ಮಾತನಾಡಿದರು.
ಇಂಧನ ತಯಾರಿಕೆಯಲ್ಲಿ ನಾವು ಉತ್ತಮ ಪ್ರಗತಿ ಸಾಧಿಸುತ್ತಿದ್ದೇವೆ. ಹಸಿರುಮನೆ ಪರಿಣಾಮ, ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆ ಸಮಸ್ಯೆಯಿಂದ ನಾವು ಹೊರಬರಬೇಕಾಗಿದೆ. ಇದುವರೆಗೆ ದೇಶದಲ್ಲಿ ಈ ಸಮಸ್ಯೆಗಳನ್ನು ಶೇಕಡಾ 21ರಷ್ಟು ತಗ್ಗಿಸಲು ಸಾಧ್ಯವಾಗಿದ್ದು ಅದು ಮುಂದಿನ ದಿನಗಳಲ್ಲಿ ಶೇಕಡಾ 33ರಿಂದ ಶೇಕಡಾ 35ರಷ್ಟಾಗಬೇಕು.
ಎನ್ ಸಿಸಿಆರ್ ಡಿ ಬೆಂಗಳೂರಿನ ಐಐಎಸ್ಸಿ ಕೇಂದ್ರದಲ್ಲಿ 37 ಕೋಟಿ ರೂಪಾಯಿ ಹಣ ಹೂಡಿಕೆಯೊಂದಿಗೆ ಸ್ಥಾಪಿಸಲಾಗಿದ್ದು ಈ ಮೂಲಕ ಆಟೋಮೋಟಿವ್, ಧರ್ಮಲ್ ಏರೋಸ್ಪೇಸ್ ಮತ್ತು ಅಗ್ನಿಶಾಮಕ ಸಂಶೋಧನೆಗಳಂತಹ ಕೆಲಸಗಳು ನಡೆಯಲಿವೆ.
Advertisement