ವಿಜಯಪುರ : ಪ್ರೇಮಿಯೊಬ್ಬ ತನ್ನ ಪ್ರೇಯಸಿ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪರಿಣಾಮ ಮನನೊಂದ ಪ್ರೇಯಸಿ ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಸಿಂದಗಿ ತಾಲೂಕಿನ ಬೂದಿಹಾಳದ ಪಿ.ಎಚ್. ಗ್ರಾಮದ 23 ವರ್ಷದ ಸುಧಾರಾಣಿ ಬಿರಾದಾರ, ಸೀಮೆ ಎಣ್ಣೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಿಯುಸಿಯಿಂದ ಸುಧಾರಾಣಿ ಹಾಗೂ ಕೆರೂಟಗಿ ಗ್ರಾಮದ ಶಿವಾನಂದ ನಡುವೆ ಪರಿಚಯವಾಗಿತ್ತು. ನಂತರ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ, ಅನೇಕ ಫೋಟೋ ಕ್ಲಿಕಿಸಿಕೊಂಡಿದ್ದರು. ಕೆಲವು ದಿನಗಳ ನಂತರ, ಸುಧಾರಾಣಿ ಶಿವಾನಂದ ಬಿರಾದಾರನನ್ನು ಮದುವೆಯಾಗಲು ನಿರಾಕರಿಸಿದಳು. ಇದರಿಂದ ಆಕ್ರೋಶಗೊಂಡ ಶಿವಾನಂದ, ಸುಧಾರಾಣಿ ಜೊತೆ ತೆಗೆಸಿಕೊಂಡಿದ್ದ ಸೆಲ್ಫೀ ಫೋಟೋಗಳನ್ನು ಫೇಸ್ಬುಕ್ನಲ್ಲಿ ಅಪಲೋಡ್ ಮಾಡಿದ್ದ.
ಇದನ್ನು ನೋಡಿದ ಸುಧಾರಾಣಿ ತನ್ನ ಪ್ರೀತಿಯ ವಿಚಾರ ಎಲ್ಲೆಡೆ ಪ್ರಚಾರವಾಯಿತು ಎಂದು ಮನನೊಂದು ಸೆ.17ರಂದು ಸೀಮೆ ಎಣ್ಣೆ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ವಿಷಯ ತಿಳಿಯುತ್ತಿದ್ದಂತೆ ಪೋಷಕರು ಆಕೆಯನ್ನು ತಕ್ಷಣವೇ ಸಿಂದಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಯುವತಿ ಕೊನೆಯುಸಿರೆಳೆದಿದ್ದಾಳೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಾಯಿ ನೀಲಮ್ಮ ನೀಲಕಂಟ ಬಿರಾದಾರ, ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Advertisement