ಬೆಂಗಳೂರು: ಅ.14ರಿಂದ ಚಳಿಗಾಲ ಅಧಿವೇಶನ ಆರಂಭವಾಗುತ್ತಿದ್ದು, ಈ ನಡುವಲ್ಲೇ ವಿರೋಧ ಪಕ್ಷದ ನಾಯಕರು ಯಾರಾಗುತ್ತಾರೆಂಬ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ. ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರು ಮುಂದುವರೆದಿದ್ದು, ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿಬಿದ್ದ ಬಳಿಕ ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ.
ಒಂದೆಡೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದ್ದರೆ, ಮತ್ತೊಂದಡೆ ಪರಮೇಶ್ವರ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸೋನಿಯಾ ಹಾಗೂ ಪರಮೇಶ್ವರ್ ಅವರ ಈ ಭೇಟಿ ಸಾಕಷ್ಟು ಕುತೂಹಲ, ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಭೇಟಿ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪರಮೇಶ್ವರ್ ಅವರು, ವಿರೋಧ ಪಕ್ಷದ ನಾಯಕ ವಿಚಾರ ಸಂಬಂಧ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ನಾನೊಬ್ಬ ಮೂಲ ಕಾಂಗ್ರೆಸ್ಸಿಗ. ಮುಂದೆಯೂ ಎಂದೆಂದಿಗೂ ಇಲ್ಲಿಯೇ ಇರುತ್ತೇನೆ. ಪಕ್ಷದ ಸಿದ್ಧಾಂತ ಕಾಂಗ್ರೆಸ್ಸಿನಲ್ಲಿರುವ ಎಲ್ಲರೂ ಸ್ವೀಕರಿಸಿದ್ದಾರೆ. ಹೊರಗಿನಿಂದ ಬಂದವರು ಹಾಗೂ ಮೂಲ ಕಾಂಗ್ರೆಸ್ಸಿನಲ್ಲಿರುವವರ ನಡುವೆ ಯಾವುದೇ ಭಿನ್ನತೆಗಳಿಲ್ಲ ಎಂದು ಹೇಳಿದ್ದಾರೆ.
ಅಧಿವೇಶನಕ್ಕೂ ಮುನ್ನವೇ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲಾಗುತ್ತದೆ. ಪಕ್ಷವನ್ನು ಒಂಟಿಯಾಗಿ ಬೆಳೆಸುತ್ತೇವೆಂಬ ಆಲೋಚನೆ ತಪ್ಪು. ನಮ್ಮಲ್ಲಿ ಒಮ್ಮತವಿದ್ದು, 2013ರಲ್ಲಿ ಸಾಮೂಹಿಕ ನಾಯಕತ್ವದಿಂದ ಪಕ್ಷವನ್ನು ಅಧಿಕಾರಕ್ಕೆ ತಂದಂತೆಯೇ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರೋಣ. ಸೋನಿಯಾ ಭೇಟಿ ಹಿಂದೆ ಯಾವುದೇ ಉದ್ದೇಶಗಳಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement