ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗುತ್ತಿದ್ದ ಭಾರೀ ಮೊತ್ತದ ದಂಡವನ್ನು ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರದ ಈ ಕ್ರಮಕ್ಕೆ ಪರ ಹಾಗೂ ವಿರೋಧದ ಕೂಗುಗಳು ಕೇಳಿ ಬರತೊಡಗಿವೆ.
ದಂಡ ಇಳಿಕೆ ಮಾಡಿದ ಸರ್ಕಾರ ಕ್ರಮಕ್ಕೆ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ ಹಾಗೂ ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳುತ್ತಿರುವ ತಜ್ಞರು, ನಗರದಲ್ಲಿ ಸಂಭವಿಸುವ ಪ್ರತೀ ಅಪಘಾತಕ್ಕೂ ಸರ್ಕಾರವೇ ಹೊಣೆಯಾಗಲಿದೆ ಎಂದು ಹೇಳುತ್ತಿದ್ದಾರೆ.
ನಗರಲ್ಲಿ ಸಂಭವಿಸುವ ಶೇ.75ರಷ್ಟು ಅಪಘಾತಗಳು ಅತೀ ವೇಗ, ಒನ್ ವೇಯಲ್ಲಿ ಬರುವುದು, ಸಿಗ್ನಲ್ ಜಂಪ್ ಗಳಿಂದಲೇ ಹೆಚ್ಚು ಸಂಭವಿಸುತ್ತವೆ. ದಂಡ ಇಳಿಕೆ ಮಾಡುವ ಮೂಲಕ ಸರ್ಕಾರ ತನ್ನ ಕೈಗೆ ರಕ್ತ ಮಾಡಿಕೊಳ್ಳುತ್ತದೆ ಎಂದು ನಗರದ ನಿವಾಸಿ ಜಯಕುಮಾರ್ ಹೇಳಿದ್ದಾರೆ.
ದುಬಾರಿ ದಂಡ ವಿಧಿಸಿದ ಬಳಿಕ ನಗರದಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿತ್ತು. ದಂಡ ಇಳಿಕೆಯಿಂದ ಮತ್ತೆ ಅಪಘಾತ ಸಂಖ್ಯೆ ಹೆಚ್ಚಾಗಲಿದೆ. ದಂಡ ಕಟ್ಟುವ ಭಯದಿಂದಲಾದರೂ ಜನರು ನಿಯಮಗಳನ್ನು ಪಾಲನೆ ಮಾಡುತ್ತಿದ್ದರು. ಇದೀಗ ನಿಯಮ ಉಲ್ಲಂಘಿಸಲು ಅವರಿಗೆ ಅನುಮತಿ ನೀಡಿದಂತಾಗಿದೆ ಎಂದು ಹೆಚ್ಎಸ್ಆರ್ ಲೈಔಟ್ ನಿವಾಸಿಯೊಬ್ಬರು ಹೇಳಿದ್ದಾರೆ.
ಬಿಜೆಪಿ ಸರ್ಕಾರ ತೆಗೆದುಕೊಂಡ ಕೆಟ್ಟ ನಿರ್ಧಾರವಿದು. ದಂಡ ಇಳಿಸುವಂತೆ ಜನರು ಕೇಳಿದರೆ, ಅದನ್ನು ಸರ್ಕಾರ ಹೇಗೆ ಮಾಡುತ್ತದೆ? ಅಪಘಾತ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಸಂಚಾರ ದಂಡವನ್ನು ಏರಿಕೆ ಮಾಡಲಾಗಿತ್ತು. ದಂಡ ಇಳಿಕೆಯಿಂದ ಏನೂ ಆಗುವುದಿಲ್ಲ ಎಂದು ಸಂಚಾರ ತಜ್ಞ ಎಂ.ಎನ್.ಶ್ರೀಹರಿ ಹೇಳಿದ್ದಾರೆ.
ದಂಡ ಏರಿಕೆ ಜನರ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಸಂಚಾರ ನಿಯಮ ಉಲ್ಲಂಘನೆ ಸಂಖ್ಯೆ ಕಡಿಮೆಯಾಗಿತ್ತು. ಸಂಚಾರಿ ಪೊಲೀಸರಿಗೆ ಇದರಿಂತ ಹೆಚ್ಚೆಚ್ಚು ಹಣ ಬರುತ್ತದೆ ಎಂದು ಜನರು ಹೇಳುತ್ತಿದ್ದರು. ಆದರೆ, ಈ ದಂಡ ಜನರ ಪ್ರಾಣವನ್ನು ಕಾಪಾಡುತ್ತದೆ ಎಂದು ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯ ಸಂಚಾರಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Advertisement