ರಾಯಚೂರು: ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿಯೊರ್ವ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಬಸಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
6ನೇ ತರಗತಿ ವಿದ್ಯಾರ್ಥಿ ಅನಿಲ್ ಕುಮಾರ್ ತಿಮ್ಮಪ್ಪ ಮೃತ ವಿದ್ಯಾರ್ಥಿ. ಭೀಕರ ಮಳೆಯಿಂದಾಗಿ ಶಾಲೆಯ ಮೇಲ್ಛಾವಣಿ ಮೇಲೆ ಸಂಗ್ರಹವಾಗಿದ್ದ ನೀರು ಹೊರಹಾಕಲು ತೆರಳಿದ್ದ ವೇಳೆ ಆಯತಪ್ಪಿ ಆತನಿಗೆ ವಿದ್ಯುತ್ ತಗುಲಿದೆ.
ವಿದ್ಯುತ್ ಆಘಾತದಿಂದ ಅಸ್ವಸ್ಥವಾಗಿದ್ದ ಆತನನ್ನು ತಕ್ಷಣವೇ ಕವಿತಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಶಿಕ್ಷಕರು ಶಾಲೆಗೆ ಬರುವ ಮುನ್ನವೇ ಈ ದುರ್ಘಟನೆ ಸಂಭವಿಸಿದ್ದು, ವಿದ್ಯಾರ್ಥಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆಗೆ ಸಂಬಂಧಿಸಿದಂತೆ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement