ಬೆಂಗಳೂರು: ಸ್ವಾಮಿಜಿಗಳ ಫೋನ್ ಟ್ಯಾಪ್ ಮಾಡಿಸಿರುವುದು ನಾಚಿಗೇಡಿನ ವಿಚಾರ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಶುಕ್ರವಾರ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳ ದೂರವಾಣಿ ಕದ್ದಾಲಿಕೆ ಏಕೆ ಮಾಡಿದ್ದಾರೆ? ಎಂಬುದು ತನಿಖೆಯಲ್ಲಿ ಎಲ್ಲವೂ ಹೊರ ಬರಲಿ. ಸ್ವಾಮೀಜಿಗಳನ್ನು ರಾಜಕೀಯ ವ್ಯವಸ್ಥೆಗೆ ತರುವುದು ಎಷ್ಟು ಸರಿ? ದೇಶ ದ್ರೋಹಿ ಸಂಘಟನೆಗಳು, ಭಯೋತ್ಪಾದಕರ ದೂರವಾಣಿ ಕದ್ದಾಲಿಕೆ ಮಾಡಲು ಅವಕಾಶ ಇದೆ. ಸ್ವಾಮಿಜಿಗಳದ್ದು ದೂರವಾಣಿ ಕದ್ದಾಲಿಕೆ ಏಕೆ ಮಾಡಲಾಗಿದೆ? ಎಂದು ಅವರು ಕಿಡಿಕಾರಿದ್ದಾರೆ.
ಬ್ರಿಟೀಷರ ಕಾಲದಿಂದಲೂ ಟೆಲಿಫೋನ್ ಕದ್ದಾಲಿಕೆ ಮಾಡುವುದು ದೊಡ್ಡ ಅಪರಾಧವಾಗಿದೆ. ಯಾರು ಏನೇ ಹೇಳಿದರೂ, ಟೆಲಿಫೋನ್ ಕದ್ದಾಲಿಕೆ ಮಾಡಿರುವುದು ಸತ್ಯ. ಇದಕ್ಕೆ ಸಾಕ್ಷ್ಯ ಎಂಬಂತೆ ಹಲವಾರು ನಿದರ್ಶನಗಳು ಈಗಾಗಲೇ ಮಾಧ್ಯಮಗಳಲ್ಲಿ ಬಂದಿವೆ. ರಾಜಕೀಯ ನಾಯಕರ ಫೋನ್ ಕದ್ದಾಲಿಕೆ ಮಾಡಿರಬಹುದು. ಆದರೆ, ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿಗಳ ಫೋನ್ ಯಾವ ಕಾರಣಕ್ಕೆ ಕದ್ದಾರಿಯೆ ಮಾಡಿದ್ದಾರೆ. ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿರುವುದು ಸಾಕಷ್ಟು ನೋವನ್ನು ತರಿಸಿದೆ. ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿರುವವರಿಗೆ ನಾಚಿಕೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ತಿಳಿಸಿದ್ದಾರೆ.
Advertisement