ಔರಾದ್ಕರ್ ವರದಿ ಜಾರಿಗೆ ತರುವುದು ನಿಶ್ಚಿತ: ಸಿಎಂ ಯಡಿಯೂರಪ್ಪ 

ನವರಾತ್ರಿ ಹಬ್ಬದ ಶುಭಗಳಿಗೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜ್ಯದ ಪೊಲೀಸರಿಗೆ ಶುಭಸುದ್ದಿ ನೀಡಿದ್ದಾರೆ. 
ಸಿಎಂ ಬಿ ಎಸ್ ಯಡಿಯೂರಪ್ಪ
ಸಿಎಂ ಬಿ ಎಸ್ ಯಡಿಯೂರಪ್ಪ

ಮೈಸೂರು: ನವರಾತ್ರಿ ಹಬ್ಬದ ಶುಭಗಳಿಗೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜ್ಯದ ಪೊಲೀಸರಿಗೆ ಶುಭಸುದ್ದಿ ನೀಡಿದ್ದಾರೆ. ರಾಘವೇಂದ್ರ ಔರಾದ್ಕರ್ ವರದಿಯನ್ನು ಆದಷ್ಟು ಶೀಘ್ರವೇ ಜಾರಿಗೆ ತರುತ್ತೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.


ಅವರು ನಿನ್ನೆ ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಮ್ಮ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿರುವಂತೆ ಇನ್ನು ನಾಲ್ಕಾರು ದಿನಗಳಲ್ಲಿ ಔರಾದ್ಕರ್ ವರದಿಯನ್ನು ಜಾರಿಗೆ ತಂದು ಪೊಲೀಸ್ ಸಿಬ್ಬಂದಿಗೆ ನ್ಯಾಯ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂದು ತಿಳಿಸಿದರು. 


ಇದಕ್ಕೂ ಮುನ್ನ ಅವರು ನಿನ್ನೆ ಮೈಸೂರಿನ ಸರಸ್ವತಿಪುರಂನಲ್ಲಿರುವ ಸಾಹಿತಿ ಎಸ್ ಎಸ್ ಭೈರಪ್ಪ ಅವರ ಮನೆಗೆ ತೆರಳಿ ದಸರಾ ಉದ್ಘಾಟನೆಗೆ ಆಹ್ವಾನಿಸಿ ಸನ್ಮಾನಿಸಿದರು.


ಮೈಸೂರಿನ ಶಾಸಕರು, ಸಂಸದ ಪ್ರತಾಪ ಸಿಂಹ, ಉಸ್ತುವಾರಿ ಸಚಿವ ವಿ ಸೋಮಣ್ಣ ಅವರ ನೇತೃತ್ವದಲ್ಲಿ ದಸರಾ ಮಹೋತ್ಸವಕ್ಕೆ ಮೈಸೂರು ಅರಮನೆ ಸುತ್ತಮುತ್ತ ಬಹಳ ಉತ್ತಮವಾಗಿ ವ್ಯವಸ್ಥೆ ಕಲ್ಪಿಸಿದ್ದಾರೆ. ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ದರ್ಶನಕ್ಕೆ ಭಾನುವಾರ ಬೆಳಗ್ಗೆ ಹೋಗುತ್ತೇನೆ ಎಂದರು ಸಿಎಂ ಯಡಿಯೂರಪ್ಪ.


ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪನವರು ಈ ಬಾರಿಯ ದಸರಾ ಉದ್ಘಾಟಿಸುತ್ತಿರುವ ಈ ನಾಡಿನ ಆರೂವರೆ ಕೋಟಿ ಕನ್ನಡಿಗರಿಗೆ ಸಿಗುತ್ತಿರುವ ಗೌರವ ಎಂದು ನಾನು ಭಾವಿಸಿದ್ದೇನೆ. ಅವರ ಜೊತೆ ಕರ್ನಾಟಕದ ಮತ್ತು ಕನ್ನಡದ ಹಲವು ಸಮಸ್ಯೆಗಳು ಮತ್ತು ವಿಷಯಗಳ ಬಗ್ಗೆ ಚರ್ಚೆ ಮಾಡಿದೆವು, ಅನೇಕ ಸಲಹೆಗಳನ್ನು ಅವರು ಕೊಟ್ಟರು. ಕನ್ನಡವನ್ನು ಉಳಿಸಬೇಕು, ಇಂಗ್ಲಿಷ್ ಭಾಷೆಯ ಕಾರಣಕ್ಕೆ ಕನ್ನಡಕ್ಕೆ ಹಿನ್ನಡೆ ಆಗಬಾರದು ಎನ್ನುವ ಭಾವನೆಗಳನ್ನು ವ್ಯಕ್ತಪಡಿಸಿದರು ಎಂದರು. 


ರಾಘವೇಂದ್ರ ಔರಾದ್ಕರ್ ವರದಿಯಂತೆ ರಾಜ್ಯ ಪೊಲೀಸರ ವೇತನ ಶ್ರೇಣಿಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಕಳೆದ ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com