ಬೆಂಗಳೂರು: ಕೊರೋನಾ ವೈರಸ್ ಸೋಂಕಿನ ಸಂದರ್ಭದಲ್ಲಿ ಕರ್ನಾಟಕ ಗಡಿ ಸಮಸ್ಯೆಯನ್ನು ಎದುರಿಸುತ್ತಿದೆ. ಮಂಗಳೂರು ಗಡಿಯಲ್ಲಿ ಕೇರಳದ ಕಾಸರಗೋಡು ಮತ್ತು ಮಹಾರಾಷ್ಟ್ರಕ್ಕೆ ಬೆಳಗಾವಿ ಗಡಿ ಭಾಗದಿಂದ ಜನರ ಸಂಚಾರ ರಾಜ್ಯ ಸರ್ಕಾರಕ್ಕೆ ತೀವ್ರ ಆತಂಕವಾಗಿದೆ.
ಮಂಗಳೂರು ಗಡಿಯಲ್ಲಿ ಕಾಸರಗೋಡಿನಿಂದ ಜನರ, ವಾಹನ ಸಂಚಾರವನ್ನು ಬಂದ್ ಮಾಡಲಾಗಿದ್ದರೂ ಕೂಡ ದಿನವೂ ಮಂಗಳೂರಿಗೆ ಆರೋಗ್ಯ ಸೇವೆಗೆಂದು ಸಾವಿರಾರು ಜನರು ಬರುತ್ತಿರುತ್ತಾರೆ. ಕಾಸರಗೋಡಿನಿಂದ ಮಂಗಳೂರಿಗೆ ಇರುವುದು ಕೇವಲ 30 ನಿಮಿಷಗಳ ಪ್ರಯಾಣ. ಅದೇ ಕಾಸರಗೋಡಿನಿಂದ ತಿರುವನಂತಪುರ ಅಥವಾ ಕೊಚ್ಚಿಗೆ ಹೋಗಬೇಕೆಂದರೆ 8 ಗಂಟೆ ಪ್ರಯಾಣ ಮಾಡಬೇಕು. ಹೀಗಾಗಿ ಕಾಸರಗೋಡಿನಿಂದ ಮಂಗಳೂರಿಗೆ ಬರಲು ಜನರು ನೋಡುತ್ತಾರೆ. ಮಂಗಳೂರಿಗೆ ನೂರಾರು ಪ್ರವೇಶ ಕೇಂದ್ರಗಳು ಇರುವುದರಿಂದ ಸಂಪೂರ್ಣವಾಗಿ ಬಂದ್ ಮಾಡಲು ಸಾಧ್ಯವಾಗುವುದಿಲ್ಲ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಡಿಜಿಪಿ ಮತ್ತು ಐಜಿಪಿ ಪ್ರವೀಣ್ ಸೂದ್, ಮಹಾರಾಷ್ಟ್ರದಿಂದ ಬೆಳಗಾವಿ ಮೂಲಕ ಮತ್ತು ಕೇರಳದ ಕಾಸರಗೋಡಿನಿಂದ ಮಂಗಳೂರಿಗೆ ಜನರನ್ನು ಬರದಂತೆ ತಡೆಯುವುದು ನಿಜಕ್ಕೂ ಸವಾಲಾಗಿದೆ. ಕೊರೋನಾ ರೋಗಲಕ್ಷಣವಿಲ್ಲದ ಹೊರತು ಜನರನ್ನು ಬರಬೇಡಿ ಎಂದು ಹೇಳಲು ಆಗುವುದಿಲ್ಲ ಎನ್ನುತ್ತಾರೆ.
ಮಂಗಳೂರು ನಗರ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ, ಕಾಸರಗೋಡು ಜಿಲ್ಲೆಯಲ್ಲಿ 38 ಕೊರೋನಾ ಕೇಸುಗಳು ಪತ್ತೆಯಾದ ನಂತರ ನಾವು ಗಡಿಯನ್ನು ಮುಚ್ಚಿದೆವು. ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯನ್ನು ಕೊರೋನಾ ರೋಗಿಗಳ ಚಿಕಿತ್ಸೆಗೆಂದೇ ಮೀಸಲಿಡಲಾಗಿದೆ ಎಂದರು.
ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ, ಮೀರಜ್ ನಿಂದ ನೂರಾರು ಜನರು ನಿತ್ಯವೂ ಬರುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬೆಳಗಾವಿ ಜಿಲ್ಲಾಧಿಕಾರಿ ಎಸ್ ಬಿ ಬೊಮ್ಮನಹಳ್ಳಿ, ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಿಂದ ಸುಮಾರು 500 ಮಂದಿ ಬಂದಿದ್ದಾರೆ. ಅಂತವರಿಗೆ ನಿರಾಶ್ರಿತ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಮಹಾರಾಷ್ಟ್ರ ಗಡಿಭಾಗದ 8 ಕಡೆ ನಾವು ಬಿಗಿ ಮಾಡಿದ್ದೇವೆ ಎಂದರು.
Advertisement