ಕಲಬುರಗಿ: ಸಾವು ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ. ಬದುಕಿ ಸಾಧಿಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರೇರಣಾದಾಯಕ ಮಾತುಗಳನ್ನಾಡಿದ್ದಾರೆ.
ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಚಂದ್ರಕಾಂತ್ ಬಿರಾದರ್ ಅವರ ಕಲಬುರಗಿಯ ಲಾಡ್ ಚಿಂಚೋಳಿ ನಿವಾಸಕ್ಕೆ ಇಂದು ಭೇಟಿ ನೀಡಿ ಸರ್ಕಾರದಿಂದ 5ಲಕ್ಷ ರೂ.ಪರಿಹಾರದ ಚೆಕ್ ಹಾಗೂ ವೈಯಕ್ತಿಕವಾಗಿ 1 ಲಕ್ಷ ಪರಿಹಾರ, ವಿಧವಾ ವೇತನದ ಆದೇಶದ ಪ್ರತಿ, ಅಂತ್ಯ ಸಂಸ್ಕಾರದ 5 ಸಾವಿರ ರೂ.ಗಳ ಚೆಕ್ ನೀಡಿ ಮೃತರ ಕುಟುಂಬಕ್ಕೆ ಧೈರ್ಯ ತುಂಬಿದರು.
ಧೈರ್ಯವಾಗಿರಿ. ಚಿಂತೆ ಮಾಡಿ ಏನೂ ಪ್ರಯೋಜನವಿಲ್ಲ. ಸರ್ಕಾರ ನಿಮ್ಮ ನೆರವಿಗಿದೆ ಎಂದು ಮೃತ ರೈತನ ಪತ್ನಿಗೆ ಸಚಿವರು ಆತ್ಮಸ್ಥೈರ್ಯ ತುಂಬಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಲಾಕ್ಡೌನ್ನಿಂದಾಗಿ ಕಲ್ಲಂಗಡಿ ಮಾರಾಟಕ್ಕೆ ತೊಂದರೆಯಾಗಿದ್ದರಿಂದ ಚಂದ್ರಕಾಂತ್ ಬಿರಾದಾರ್ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಗಮನಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಕ್ಷಣವೇ ಈ ಸಂಬಂಧ ಸಭೆ ನಡೆಸಿ ರೈತರ ಉತ್ಪನ್ನಗಳ ಮಾರಾಟಕ್ಕೆ ಲಾಕ್ಡೌನ್ನಿಂದ ತೊಂದರೆಯಾಗಬಾರದೆಂದು ಮಹತ್ತರ ತೀರ್ಮಾನ ಕೈಗೊಂಡರು. ಅದರಂತೆ ಕೃಷಿ ಉತ್ಪನ್ನಗಳಿಗೆ ರೈತರಿಗೆ ಯಾವುದೇ ತೊಂದರೆಯಾಗದಂತೆ ಹಲವು ಮಹತ್ತರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಸಾಗಾಣಿಕೆದಾರರಾಗಲೀ ಕೂಲಿಕಾರ್ಮಿಕರಾಗಲೀ ಖರೀದಿದಾರರಾಗಲೀ ಎಲ್ಲರಿಗೂ ಜೀವಭಯ ಇರುವುದು ಸಹಜ. ಸಾಮಾಜಿಕ ಅಂತರ ಕಾಯ್ದುಕೊಂಡು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಖರೀದಿದಾರರ ಮನವೊಲಿಸಿ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.
Advertisement