ಕೋವಿಡ್‌-19: ರಾಜ್ಯದಲ್ಲಿ ಆತಂಕದ ಸನ್ನಿವೇಶ ಇಲ್ಲ; ಬಿಬಿಎಂಪಿ ವಾರ್ ರೂಮಿನಲ್ಲಿ ಕೊರೊನಾ ಡ್ಯಾಷ್‌ಬೋರ್ಡ್- ಡಾ.ಕೆ.ಸುಧಾಕರ್‌

ಬಿಬಿಎಂಪಿ ವಾರ್ ರೂಂನಲ್ಲಿ ಕೊರೊನಾ ಡ್ಯಾಷ್ ಬೋರ್ಡ್ ನ್ನು ಇಂದಿನಿಂದ ರಾಜ್ಯಾದ್ಯಂತ ಆರಂಭಿಸಿದ್ದು, ಯಾವುದೇ ಮೂಲೆಯಲ್ಲಿನ ಸೋಂಕಿತರ ಸಂಖ್ಯೆ ಬಗ್ಗೆ ಫೋನ್, ಡೆಸ್ಕ್ ಟಾಪ್ ನಲ್ಲಿ ನೋಡಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಡಾ.ಸುಧಾಕರ್
ಡಾ.ಸುಧಾಕರ್

ಬೆಂಗಳೂರು: ಬಿಬಿಎಂಪಿ ವಾರ್ ರೂಂನಲ್ಲಿ ಕೊರೊನಾ ಡ್ಯಾಷ್ ಬೋರ್ಡ್ ನ್ನು ಇಂದಿನಿಂದ ರಾಜ್ಯಾದ್ಯಂತ ಆರಂಭಿಸಿದ್ದು, ಯಾವುದೇ ಮೂಲೆಯಲ್ಲಿನ ಸೋಂಕಿತರ ಸಂಖ್ಯೆ ಬಗ್ಗೆ ಫೋನ್, ಡೆಸ್ಕ್ ಟಾಪ್ ನಲ್ಲಿ ನೋಡಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ಏ.07 ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕಿತರು, ಕ್ವಾರಂಟೈನ್ ನಲ್ಲಿರುವವರ ಅಂಕಿ-ಅಂಶಗಳ ಬಗ್ಗೆ ಮಾಹಿತಿ ಡ್ಯಾಷ್ ಬೋರ್ಡ್‌ ನಿಂದ ಸಿಗಲಿದೆ. ಕೊರೊನಾ ಸೋಂಕಿತರ ಚಿಕಿತ್ಸೆ ವಿಧಾನ, ಆಸ್ಪತ್ರೆಗಳ ವಿವರ ಈ ಡ್ಯಾಷ್ ಬೋರ್ಡ್‌ನಲ್ಲಿ ಇರಲಿದೆ. ಇಡೀ ರಾಜ್ಯದಲ್ಲಿ ಎಷ್ಟು ಆಸ್ಪತ್ರೆಗಳು ಕೊರೊನಾಗಾಗಿ ಮೀಸಲಿವೆ, ಎಷ್ಟು ಹಾಸಿಗೆ ಖಾಲಿ ಇವೆ, ಎಷ್ಟು ವೈದ್ಯರಿದ್ದಾರೆ ಎನ್ನುವ ಮಾಹಿತಿ ಈ ಡ್ಯಾಷ್ ಬೋರ್ಡ್ ನಲ್ಲಿ ಲಭ್ಯವಿರಲಿದೆ ಎಂದರು.

4.5 ಲಕ್ಷ ನರ್ಸಿಂಗ್ ವಿದ್ಯಾರ್ಥಿಗಳಿಗೆ ಇಂದಿನಿಂದ ಕೋವಿಡ್ ನಿರ್ವಹಣೆ ಬಗ್ಗೆ ಆನ್‌ಲೈನ್ ಮೂಲಕ ತರಬೇತಿ ನೀಡಲಾಗುತ್ತಿದೆ. ಈ ವರೆಗೂ 8.5 ಸಾವಿರ ನರ್ಸಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ಪಡೆದಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದರು.

ದೆಹಲಿಯ ತಬ್ಲೀಘ್ ಜಮಾತ್ ಗೆ ಹೋದವರ ಪೈಕಿ 35 ಜನರಿಗೆ ಕೊರೋನಾ ಸೋಂಕು ತಗುಲಿದೆ. ನಂಜನಗೂಡಿನಲ್ಲೂ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ. ಈ ಎರಡೂ ಘಟನೆಗಳು ಇಲ್ಲದಿದ್ದರೆ ರಾಜ್ಯದಲ್ಲಿ ಕೊರೊನಾ ಬಹುತೇಕ ನಿಯಂತ್ರಣದಲ್ಲಿರುತ್ತಿತ್ತು. ಆದರೂ ನಮ್ಮಲ್ಲಿ ಕೊರೋನಾ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಜರುಗಿಸಲಾಗಿದೆ. ಭಾರತದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 11 ನೇ ಸ್ಥಾನಕ್ಕೆ ಇಳಿದಿರಿರುವುದೇ ಇದಕ್ಕೆ ಸಾಕ್ಷಿ ಎಂದು ಸಚಿವರು ಹೇಳಿದ್ದಾರೆ.

ಲಾಕ್ ಡೌನ್ ಮುಂದುವರೆಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ವೈದ್ಯರು ಮತ್ತು ತಜ್ಞರ ಜೊತೆ ಯಡಿಯೂರಪ್ಪ ಸಮಾಲೋಚನೆ ನಡೆಸುತ್ತಿದ್ದಾರೆ. ಕೇಂದ್ರದ ಕ್ರಮ, ಬೇರೆ ರಾಜ್ಯಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ನೋಡಿಕೊಂಡು ಮುಂದಿನದ್ದನ್ನು ನಿರ್ಧರಿಸುತ್ತಾರೆ ಎಂದರು. 

ನಮ್ಮ ರಾಜ್ಯದಲ್ಲಿ ಕೊರೋನಾ ಆತಂಕ ಪಡುವ ಮಟ್ಟಕ್ಕೆ ಹೋಗಿಲ್ಲ. ರಾಜ್ಯದ 175 ಪಾಸಿಟಿವ್ ಪ್ರಕರಣಗಳಲ್ಲಿ 25 ಜನ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಆತಂಕದ ಸನ್ನಿವೇಶ ಇಲ್ಲ. ಕೊರೊನಾದಿಂದ ಗುಣಮುಖರಾಗಿರುವವರನ್ನು ಕೊರೋನಾ ವಾರಿಯರ್ಸ್ ಆಗಿ  ಜಾಗೃತಿಗೆ ಬಳಕೆ ಮಾಡಿಕೊಳ್ಳುವ ಚಿಂತನೆ ಇದೆ. ಈ ಸಂಬಂಧ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಆದರೆ ಗುಣಮುಖರಾದರೂ ಅವರನ್ನೆಲ್ಲ ಇನ್ನಷ್ಟು ನಿಗಾ ಇಟ್ಟು ಹೋಂ ಕ್ವಾರಂಟೈನ್ ನಲ್ಲಿ‌ ಮುಂದುವರೆಸಿದ್ದೇವೆ. ಈಗಾಗಲೇ ಸಾಕಷ್ಟು ಜನ ಕೊರೋನಾ ವಾರಿಯರ್ಸ್ ಆಗಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ ಎಂದರು.

ಕೊರೊನಾ ಭೀತಿಯಿಂದ ಖಾಸಗಿ ಆಸ್ಪತ್ರೆಗಳು ಮುಚ್ಚಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸುಧಾಕರ್, ಯಾರು ಖಾಸಗಿ ಆಸ್ಪತ್ರೆ ಮುಚ್ಚಿರುತ್ತಾರೆಯೋ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿವರ ಈಗಾಗಲೇ ಹೇಳಿದ್ದಾರೆ. ಈ ಜವಾಬ್ದಾರಿದಿಂದ ಯಾರು ತಪ್ಪಿಸಿಕೊಳ್ಳುವ ಕೆಲಸ ಮಾಡಬಾರದು. ನೈತಿಕತೆಯಿಂದ ನಾವೆಲ್ಲ ಕೆಲಸ ಮಾಡಬೇಕಿದೆ. ಕೋವಿಡ್ ಅಲ್ಲದೇ ಸಾಕಷ್ಟು ಜನರಿಗೆ ಬೇರೆ ಬೇರೆ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಅಂಥವರಿಗೆ ಚಿಕಿತ್ಸೆ ನೀಡುವುದು ಆಸ್ಪತ್ರೆಗಳ ಕರ್ತವ್ಯ. ಖಾಸಗಿ ಆಸ್ಪತ್ರೆಯವರು ಕೋವಿಡ್ ಗೆ ಹೆದರಿಕೊಂಡು ಆಸ್ಪತ್ರೆ ಮುಚ್ಚಿದರೆ ಮಾನವೀಯ ಮೌಲ್ಯಗಳಿಗೆ ವಿರುದ್ಧವಾದ ಕೆಲಸವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವರ ಮೇಲ್ಲೆ‌ ನಡೆಸುವುದು ಅಮಾನವೀಯ ಕೃತ್ಯ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರ ಮೇಲೆ ಹಲ್ಲೆ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸುಧಾಕರ್ ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com