ಮಂಡ್ಯ ಜಿಲ್ಲೆಗೂ ವಕ್ಕರಿಸಿದ ಕೊರೋನಾ: ಇಂದು ಮೂವರಲ್ಲಿ ಪಾಸಿಟಿವ್

ಕೊರೋನಾ ವೈರಸ್ ಸೋಂಕಿತ ದೆಹಲಿಯ ನಿಜಾಮುದ್ದೀನ್ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದ ಐವರು ಧರ್ಮಗುರುಗಳ ಸಂಪರ್ಕದಲ್ಲಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿಯ ಮೂವರು ಪುರುಷರಿಗೆ ಕೊರೋನಾ ವೈರಸ್ ಹರಡಿರುವುದು ದೃಢಪಟ್ಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಡ್ಯ: ಕೊರೋನಾ ವೈರಸ್ ಸೋಂಕಿತ ದೆಹಲಿಯ ನಿಜಾಮುದ್ದೀನ್ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದ ಐವರು ಧರ್ಮಗುರುಗಳ ಸಂಪರ್ಕದಲ್ಲಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿಯ ಮೂವರು ಪುರುಷರಿಗೆ ಕೊರೋನಾ ವೈರಸ್ ಹರಡಿರುವುದು ದೃಢಪಟ್ಟಿದೆ.

ಈ ಮೂರೂ ಸೋಂಕಿತರಿಗೂ ಮಂಡ್ಯದ ಮಿಮ್ಸ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೋನಾ ಸೋಂಕಿತ 134, 135, 136, 137 ಮತ್ತು 138 ವ್ಯಕ್ತಿಗಳೊಂದಿಗೆ ಈ ಮೂವರು ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಕೊರೋನಾ ಪತ್ತೆಯಾಗಿದೆ. 

ರಾಜ್ಯದ 171, 172 ಮತ್ತು 173ನೇ ಸೋಂಕಿತ ವ್ಯಕ್ತಿಗಳೆಂದು ಈ ಮೂವರನ್ನು ಗುರುತಿಸಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ  ಕೊರೋನಾ ವೈರಸ್ ಶಂಕಿತರ ಪೈಕಿ ಇನ್ನೂ 7 ಮಂದಿಯ ವರದಿ ಬರಬೇಕಾಗಿದೆ.

ಧರ್ಮಗುರುಗಳ ಜೊತೆ ಒಟ್ಟು 10 ಮಂದಿ ಸಂಪರ್ಕ ಹೊಂದಿದ್ದು, ಇವರ ಜೊತೆಗೆ ಸಂಪರ್ಕ ಹೊಂದಿದ್ದ 48 ಮಂದಿಯನ್ನು ಐಸೊಲೇಷನ್ ವಾರ್ಡ್​ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊವಿಡ್ 19 ಸೋಂಕಿತರು ಮಳವಳ್ಳಿ ಹಾಗೂ ನಾಗಮಂಗಲ ಪಟ್ಟಣ ನಿವಾಸಿಗಳಾಗಿದ್ದು, ಮಳವಳ್ಳಿ ಪಟ್ಟಣದ ಈದ್ಗಾ ಮೊಹಲ್ಲಾ ವಾರ್ಡ್ ಹಾಗೂ ನಾಗಮಂಗಲದ 14, 15 ಮತ್ತು 16ನೇ ವಾರ್ಡ್​ಗಳನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದೆ.

ಜನ ಸಂಚಾರಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಈ ಪ್ರದೇಶದಲ್ಲಿ 3 ಕಿಲೋ ಮೀಟರ್ ಸುತ್ತಳತೆಯನ್ನು ಕಂಟೋನ್​ಮೆಂಟ್ ಝೋನ್ ಎಂದು ಘೋಷಣೆ ಮಾಡಿದ್ದು, ಈ ನಿಷೇಧಿತ ಪ್ರದೇಶದ ೭ ಕಿಲೋ ಮೀಟರ್ ಸುತ್ತಳತೆ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಣೆ ಮಾಡಲಾಗಿದೆ.
-ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com