ಲಾಕ್‌ಡೌನ್ ಮುಂದುವರೆಸುವ ಅನಿವಾರ್ಯ ಪರಿಸ್ಥಿತಿ ಎದುರಾದರೆ ಜನರು ಸರ್ಕಾರಕ್ಕೆ ಸಹಕಾರ ನೀಡಬೇಕು: ಸಿದ್ದರಾಮಯ್ಯ

ಏಪ್ರಿಲ್ 14ರ ನಂತರವೂ ಲಾಕ್ ಡೌನ್ ನ್ನು ಮುಂದುವರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾದರೆ ರಾಜ್ಯದ ಜನತೆ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಲಾಕ್‌ಡೌನ್ ಮುಂದುವರೆಸುವ ಅನಿವಾರ್ಯ ಪರಿಸ್ಥಿತಿ ಎದುರಾದರೆ ಜನರು ಸರ್ಕಾರಕ್ಕೆ ಸಹಕಾರ ನೀಡಬೇಕು: ಸಿದ್ದರಾಮಯ್ಯ

ಬೆಂಗಳೂರು: ಏಪ್ರಿಲ್ 14ರ ನಂತರವೂ ಲಾಕ್ ಡೌನ್ ನ್ನು ಮುಂದುವರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾದರೆ ರಾಜ್ಯದ ಜನತೆ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಕೊರೋನಾ ಸೋಂಕು ತಡೆಗೆ ಮತ್ತೆ ಒಂದು ವಾರ, ಹತ್ತು ದಿನಗಳ ಕಾಲ ಲಾಕ್ ಡೌನ್ ಮುಂದುವರಿಸಬೇಕಾದ ಅನಿವಾರ್ಯತೆ ಬಂದರೆ ಜನತೆ ಪರಿಸ್ಥಿತಿಗೆ ಹೊಂದಿಕೊಂಡು ಸರ್ಕಾರಕ್ಕೆ ಸಹಕರಿಸಬೇಕು. ಇದೇ ಸಮಯದಲ್ಲಿ ಲಾಕ್ ಡೌನ್ ನಿಂದ ಜನತೆಗೆ ಅಗತ್ಯ ವಸ್ತುಗಳು ನಿಯಂತ್ರಿತ ಬೆಲೆಯಲ್ಲಿ ಜನರಿಗೆ ಸಿಗುವುದಕ್ಕೆ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಎಲ್ಲ ರೀತಿಯಿಂದಲೂ ಸಹಕರಿಸುತ್ತದೆ ಎಂದರು.  

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಹೇಳಿದ್ದೇನು?:ಲಾಕ್ ಡೌನ್ ನಿಂದಾಗಿ ಕೆಲವರಿಗೆ ಕಳೆದ 15 ದಿನಗಳಿಂದ ಸ್ವಲ್ಪವೂ ಆದಾಯವಿಲ್ಲದಾಗಿದೆ. ಆದರೆ ಕೆಲವು ದುರಾಸೆಯ ವರ್ತಕರು ಪರಿಸ್ಥಿತಿಯ ಲಾಭ ಪಡೆದುಕೊಂಡು ವಸ್ತುಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬಡಜನತೆ ಮೇಲೆ ಪರಿಣಾಮ ಬೀರುತ್ತದೆ. ಈ ವಿಷಯದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ಶೀಘ್ರವೇ ಸಮಸ್ಯೆ ಬಗೆಹರಿಸಬೇಕು.

ಇದೇ ಸಂದರ್ಭದಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರ ವೇತನ ಕಡಿತದ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಸಿಎಂ ಯಡಿಯೂರಪ್ಪ ತಮಗೆ ಕರೆ ಮಾಡಿ ಜನಪ್ರತಿನಿಧಿಗಳ ವೇತನ ಕಡಿತದ ಬಗ್ಗೆ ಕೇಳಿದ್ದು ಅದಕ್ಕೆ ನನ್ನ ಸಂಪೂರ್ಣ ಬೆಂಬಲ ನೀಡಿದ್ದೇನೆ. ಕಾಂಗ್ರೆಸ್ ನ ಶಾಸಕರು, ವಿಧಾನಪರಿಷತ್ ಸದಸ್ಯರು ಅದಕ್ಕೆ ಬೆಂಬಲ ನೀಡುತ್ತಾರೆ ಎಂಬ ನಂಬಿಕೆಯಿದೆ.

ಆದರೆ ಸರ್ಕಾರಿ ನೌಕರರ ವೇತನ ಕಡಿತ ಮಾಡುವುದು ಬೇಡ. ಸರ್ಕಾರಿ ನೌಕರರು ಈಗಾಗಲೇ ತಮ್ಮ ಒಂದು ದಿನದ ವೇತನವನ್ನು ನೀಡಿದ್ದು ಅಷ್ಟು ಸಾಕು. ಸರ್ಕಾರಿ ನೌಕರರು ಕೂಡ ಈ ಲಾಕ್ ಡೌನ್ ನಿಂದ ತೊಂದರೆ ಅನುಭವಿಸಿದ್ದಾರೆ. ನಾವದನ್ನು ಅರ್ಥ ಮಾಡಿಕೊಳ್ಳಬೇಕು.

ಲಾಕ್‌ಡೌನ್ ಉಲ್ಲಂಘಿಸುವವರ ಮತ್ತು ವೈದ್ಯರಿಗೆ ಸಹಕಾರ ನೀಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಆದರೆ ಪ್ರತಿಬಾರಿ ಒಂದು ಧರ್ಮದ ವಿರುದ್ಧ ಸುಳ್ಳು ಸುದ್ದಿ, ಅಪಪ್ರಚಾರದ ಮೂಲಕ ಕೋಮುದ್ವೇಷ ಹರಡುವ ರಾಜಕಾರಣವನ್ನು ಸಹಿಸಲು ಸಾಧ್ಯ ಇಲ್ಲ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದ  ಮುಖ್ಯಮಂತ್ರಿಗಳು ತಮ್ಮ ಮಾತು ಉಳಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com