ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಎಲ್ಲಾ ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರುಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಜನರಿಗೆ ಆಹಾರ ಕೊರತೆ ಮತ್ತು ವೈದ್ಯಕೀಯ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬಂದವು. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸರ್ಕಾರದಿಂದ ಆಹಾರ ಧಾನ್ಯಗಳ ವಿತರಣೆ ಸರಿಯಾಗಿ ಆಗುತ್ತಿಲ್ಲ.ಇದರಿಂದ ಗಂಭೀರ ಸಮಸ್ಯೆಯಾಗುತ್ತಿದೆ ಎಂದು ಕಾನ್ಫರೆನ್ಸ್ ನಲ್ಲಿ ಕೇಳಿಬಂದವು.
ಇನ್ನು ಹಲವು ಜಿಲ್ಲೆಗಳಲ್ಲಿ ವೈದ್ಯಕೀಯ ಸೌಲಭ್ಯವಿಲ್ಲ, ರಕ್ತ ನಿಧಿಗಳ ಕೊರತೆಯುಂಟಾಗಿದೆ ಎಂಬ ದೂರುಗಳು ಸಹ ಬಂದವು ಎಂದು ಹಲವು ಪದಾಧಿಕಾರಿಗಳು ಹೇಳಿದರು.
ವಿತರಿಸುತ್ತಿರುವ ಆಹಾರ ಧಾನ್ಯಗಳ ಪಾಕೆಟ್ ಗಳಲ್ಲಿ ವೈಯಕ್ತಿಕ ಸ್ಟಿಕರ್ ಬಳಸುತ್ತಿರುವ ಶಾಸಕ ಅರವಿಂದ ಲಿಂಬಾವಳಿಯವರದ್ದು ಅನೈತಿಕ ಕ್ರಮ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೆಲವರು ಹೇಳಿದರು. ಸಭೆಯಲ್ಲಿ ಕಾಂಗ್ರೆಸ್ ನ ಕೋವಿಡ್ ಕಾರ್ಯಪಡೆ, ಸಾಂಕ್ರಾಮಿಕ ರೋಗ ವಿರುದ್ಧ ಪಕ್ಷದ ವತಿಯಿಂದ ಏನು ಕೆಲಸ ಮಾಡಬಹುದು, ಎನ್ ಜಿಒಗಳು ಯಾವ ರೀತಿ ಸಹಾಯ ಮಾಡುತ್ತಿವೆ, ಸರ್ಕಾರ ನೀಡಿರುವ ಭರವಸೆಗಳನ್ನು ಜಾರಿಗೆ ತಂದಿದೆಯೇ ಎಂಬಿತ್ಯಾದಿ ವಿಷಯಗಳ ಕುರಿತು ಚರ್ಚಿಸಲಾಯಿತು.
ಮತ್ತಷ್ಟು ಹದಗೆಟ್ಟ ರೈತರ ಪರಿಸ್ಥಿತಿ:ಕಳೆದ ವರ್ಷ ಬರಗಾಲ, ನಂತರ ನೆರೆ ಪ್ರವಾಹ ಇದೀಗ ಲಾಕ್ ಡೌನ್ ನಿಂದಾಗಿ ಸರಿಯಾಗಿ ಬೆಳೆ ತೆಗೆಯಲಾಗುತ್ತಿಲ್ಲ, ಬೆಳೆದ ಪದಾರ್ಥಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಕ್ಷೇತ್ರದ ಹಲವು ರೈತರು ಕಣ್ಣೀರು ಹಾಕುತ್ತಿದ್ದಾರೆ ಎಂದು ಸಹ ಶಾಸಕರು ನಿನ್ನೆ ಕೃಷಿ ಸಚಿವ ಬಿ ಸಿ ಪಾಟೀಲ್ ಜೊತೆ ನಡೆಸಿದ ಸಭೆಯಲ್ಲಿ ಹೇಳಿಕೊಂಡಿದ್ದಾರೆ.
Advertisement