ವಿಜಯಪುರ: ಹೆಂಡತಿ ಮಕ್ಕಳನ್ನು ನೋಡಲು ಊರಿಗೆ ಹೋಗಿ ವಾಪಸ್ ಬರುವಾಗ ಪೊಲೀಸ್ ಚೆಕ್ ಪೋಸ್ಟ್ ತಪ್ಪಿಸಲು ವ್ಯಕ್ತಿಯೊಬ್ಬ ನೀರಿಗೆ ಹಾರಿ ಈಜಲುಯತ್ನಿಸಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ವಿಜಯಪುರದಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ನಿವಾಸಿ ಮಲ್ಲಪ್ಪ ಬೊಮ್ಮಾಡಿ ಮೃತ ದುರ್ದೈವಿ. ಮುದ್ದೆಬಿಹಾಳ ತಾಲೂಕಿನಲ್ಲಿರುವ ತಮ್ಮ ಮಾವನ ಮನೆಗೆ ತೆರಳಿ ಪತ್ನಿಯನ್ನು ಭೇಟಿ ಮಾಡಿ ವಾಪಾಸಾಗುವಾಗ ಈ ದುರ್ಘಟನೆ ನಡೆದಿದೆ.
ಪತ್ನಿಯ ಮನೆಯಿಂದ ತಮ್ಮ ಮನೆಗೆ ವಾಪಾಸಾಗುವಾಗ ತಂಗಡಗಿ ಬ್ರಿಡ್ಜ್ ಬಳಿ ಯ ಚೆಕ್ ಪೋಸ್ಟ್ ಪೊಲೀಸರು ತಡೆದಿದ್ದಾರೆ. ಲಾಕ್ ಡೌನ್ ಇರುವುದರಿಂದ ವಾಪಸ್ ಮಾವನ ಮನೆಗೆ ತೆರಳಲು ಸೂಚಿಸಿದ್ದಾರೆ.
ಆದರೆ ವಾಪಸ್ ತೆರಳಲು ಒಪ್ಪದ ಆತ ಚೆಕ್ ಪೋಸ್ಟ್ ತಪ್ಪಿಸಿಕೊಂಡು ಹೋಗಲು ನದಿಗೆ ಹಾರಿದ್ದಾನೆ. ಆದರೆ ಅರ್ಧ ನದಿ ಈಜುವಷ್ಟರಲ್ಲಿ ದೇಹದ ಶಕ್ತಿ ಕುಗ್ಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇದನ್ನು ನೋಡಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆತನ ಶವ ಪತ್ತೆ ಮಾಡಿದ್ದಾರೆ, ಮುದ್ದೆ ಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement