ಬೆಂಗಳೂರು: ಲಾಕ್'ಡೌನ್, ಗಡಿಗಳ ಬಂದ್, ವಿವಿಧ ಸಂಸ್ಥೆಗಳಿಂದ ಬಂದ ಸಹಕಾರದಿಂದ ಕೊರೋನಾ ಪರಿಸ್ಥಿತಿ ನಿಭಾಯಿಸಲು ಸಹಾಯಕವಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ರಾಜ್ಯದ ಪ್ರಸ್ತುತ ಪರಿಸ್ಥಿತಿ ಕುರಿತಂತೆ ವಿವರಿಸಿದ್ದಾರೆ.
ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಿಮ್ಮ ಮೌಲ್ಯಮಾಪನವೇನು?
ರಾಜ್ಯದ ಪರಿಸ್ಥಿತಿ ಕುರಿತಂತೆ ಸಂಪುಟ ಸಭೆಯಲ್ಲಿ ವಿವರಾತ್ಮಕವಾಗಿ ಚರ್ಚೆ ನಡೆಸಲಾಗಿದೆ. ಎಲ್ಲಾ ಸಚಿವರುಗಳೂ ಲಾಕ್'ಡೌನ್ ಮುಂದುವರೆಸುವಂತೆಯೇ ಸಲಹೆ ನೀಡಿದ್ದಾರೆ. ಏಪ್ರಿಲ್ ಅಂತ್ಯದವರೆಗಾದರೂ ಲಾಕ್ ಡೌನ್ ಮುಂದುವರೆಸಬೇಕೆಂಬ ಸಲಹೆಗಳು ಬಂದಿವೆ. ಹಂತ ಹಂತದ ಮೂಲಕ ಲಾಕ್'ಡೌನ್ ಮುಂದುವರೆಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿಗಳು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಅವರ ಸಲಹೆ ಮೇರೆಗೆ ನಿರ್ಧಾಕ ಕೈಗೊಳ್ಳಲಿದ್ದೇವೆಂದು ಹೇಳಿದ್ದಾರೆ.
ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ನೀವು ಮಾಡಿರುವ ವಿಭಿನ್ನ ಕಾರ್ಯವೇನು?
ನಾನು ಅತ್ಯಂತ ತ್ವರಿತಗತಿಯಲ್ಲಿ ಕ್ರಮಗಳನ್ನು ಕೈಗೊಂಡಿದ್ದೇವೆ. ಕಲಬುರಗಿಯಲ್ಲಿ ವೈರಸ್'ಗೆ ವ್ಯಕ್ತಿ ಬಲಿಯಾಗುತ್ತಿದ್ದಂತೆಯೇ ಲಾಕ್'ಡೌನ್ ಘೋಷಣೆ ಮಾಡಿದ್ದೆವು. ಲಾಕ್'ಡೌನ್'ನ್ನು ಕಠಿಣವಾಗಿ ಪಾಲನೆ ಮಾಡಿದೆವು. ಇದರಿಂದ ಶೇ.80ರಷ್ಟು ಯಶಸ್ಸು ಲಭಿಸಿದೆ. 28,000ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಿದ್ದೇವೆ. ಲಾಕ್'ಡೌನ್ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಗಡಿ ಬಂದ್ ಮಾಡಿದ್ದೂ ಕೂಡ ನಮಗೆ ಸಹಾಯಕವಾಯಿತು. ಇತರೆ ರಾಜ್ಯ.ಗಳಿಗೆ ಹೋಲಿಕೆ ಮಾಡಿದರೆ ರಾಜ್ಯ ಪರಿಸ್ಥಿತಿ ಉತ್ತಮವಾಗಿಯೇ ಇದೆ. ಆದರೂ, ನನಗೆ ಸಂತಸವಿಲ್ಲ. ಹೀಗಾಗಿಯೇ ನಾವು ಲಾಕ್'ಡೌನ್ ಮುಂದುವರೆಸಲು ನಿರ್ಧರಿಸಿದ್ದೇವೆ. ಏಪ್ರಿಲ್ 14ರ ಬಳಿಕ ಜನರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆಂಬುದರ ಮೇಲೆ ನಾವು ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ.
ಲಾಕ್'ಡೌನ್ ನಡುವಲ್ಲೂ ಹಲವರಲ್ಲಿ ಸೋಂಕು ದೃಢಪಟ್ಟಿದೆ. ಪರೀಕ್ಷೆಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿಯೇ ಈ ರೀತಿಯಾಗುತ್ತಿದೆಯೇ?
ಹೆಚ್ಚೆಚ್ಚು ಪ್ರಕರಣಗಳು ಕಂಡು ಬಂದ ಜಿಲ್ಲೆಗಳಲ್ಲಿ ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಹೆಚ್ಚೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದೇ ರೀತಿಯ ಪರೀಕ್ಷೆಗಳನ್ನು ಮುಂದುವರೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ.
ನಿಮ್ಮ ಮೌಲ್ಯಮಾಪನದ ಪ್ರಕಾರ ಲಾಕ್'ಡೌನ್ ಎಷ್ಟರ ಮಟ್ಟಿಗೆ ಸಹಾಯಕವಾಗಿದೆ?
ವೈರಸ್ ನಿಯಂತ್ರಿಸಲು ಮನೆಯಲ್ಲಿಯೇ ಇದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ. ಜನರ ಹಿತಾಸಕ್ತಿಯಿಂದಾಗಿ ನಾವು ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದೇವೆ. ಆದರೆ, ಜನರು ಅದನ್ನು ಸೂಕ್ತ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ.
ಆರೋಗ್ಯ ಮೂಲಸೌಕರ್ಯಗಳ ನಿರ್ಮಾಣ ಮತ್ತು ದೀನದಲಿತರ ಪಾಲನೆ ಮಾಡಲು ಕಲ್ಯಾಣ ಯೋಜನೆಗಳನ್ನು ನಡೆಸಬೇಕಾಗುವುದರಿಂದ ರಾಜ್ಯ ಇನ್ನೆಷ್ಟು ಸಮಯದವರೆಗೆ ಲಾಕ್'ಡೌನ್ ಮುಂದುವರೆಸಬಹುದು?
ಪ್ರಧಾನಮಂತ್ರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಲಾಕ್'ಡೌನ್ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಬಡವರಿಗಾಗಿ ಈಗಾಗಲೇ ನಾವು ರೂ.2,000ದಿಂದ 15 ಲಕ್ಷಗಳವರೆಗೆ ನೀಡುತ್ತಿದ್ದೇವೆ. ಅಲ್ಲದೆ, ಎರಡು ತಿಂಗಳುಗಳ ಕಾಲ ಪಡಿತರ ವಿತರಿಸುತ್ತಿದ್ದೇವೆ. ಬಡವರಿಗೆ ಆಹಾರ ಹಾಗೂ ಇತರೆ ಸಾಮಾಗ್ರಗಳನ್ನು ನೀಡಲು ಹಲವರು ಮುಂದೆ ಬರುತ್ತಿದ್ದಾರೆ. ರಾಜ್ಯದಲ್ಲಿ ಒಬ್ಬೇ ಒಬ್ಬ ವ್ಯಕ್ತಿ ಕೂಡ ಹಸಿವಿನಿಂದ ಬಳಲುತ್ತಿಲ್ಲ. ಪ್ರತೀಯೊಬ್ಬರನ್ನೂ ತಲುಪಲು ನಾವು ಪ್ರಯತ್ನಿಸುತ್ತಿದ್ದೇನೆ.
ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದೇ ಆದರೆ, ಪರಿಸ್ಥಿತಿ ನಿಭಾಯಿಸಲು ನಾವು ಸಿದ್ಧರಿದ್ದೇವಾ?
ಯಾವುದೇ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ಈಗಾಗಲೇ ನಮ್ಮಲ್ಲಿ ಎನ್95 2,82,934 ಮಾಸ್ಕ್ ಗಳ ದಾಸ್ತುನುಗಳಿವೆ. ಅಲ್ಲದೆ, 10,000 ಮಾಸ್ಕ್ ಗಳಿಗೆ ಆರ್ಡರ್ ನೀಡಿದ್ದೇವೆ. ಕೇಂದ್ರ ಸರ್ಕಾರದಿಂದಲೂ ಮಾಸ್ಕ್ ಗಳು ಬರಲಿವೆ. ಅಲ್ಲದೆ, ವೈದ್ಯಕೀಯ ಸಿಬ್ಬಂದಿಗಲಿಗೆ 10 ಲಕ್ಷ ಪಿಪಿಇ ಗಳಿಗೆ ಆರ್ಡರ್ ನೀಡಲಾಗಿದೆ. ಇದರಲ್ಲಿ ಈಗಾಗಲೇ 2,10,245ಗಳನ್ನು ವಿತರಿಸಲಾಗಿದೆ. ಇನ್ನೂ 78,245.ದಾಸ್ತಾನುಗಳಿವೆ. ಮುಂದಿನ 2-3 ದಿನಗಳಲ್ಲಿ ಮತ್ತಷ್ಟು ವೈದ್ಯಕೀಯ ವಸ್ತುಗಳು ಬರಲಿವೆ. ಅಲ್ಲದೆ, 1,574 ವೆಂಟಿಲೇಟರ್ ಗಳಿಗೆ ಆರ್ಡರ್ ನೀಡಲಾಗಿದೆ. ಇದೀಗ ನಮ್ಮಲ್ಲಿ 50 ವೆಂಟಿಲೇಟರ್ ಗಳಿದ್ದು, ಮುಂದಿನ 3-4 ದಿನಗಳಲ್ಲಿ ಇನ್ನೂ 26 ವೆಂಟಿಲೇಟರ್ ಗಳು ಬರಲಿದೆ. ಬೆಂಗಳೂರು ನಗರದಲ್ಲಿ 2,500-3000 ಬೆಡ್ ಗಳ ವ್ಯವಸ್ಥೆಯಿದ್ದು, ಎಲ್ಲಾ ಜಿಲ್ಲೆಗಳಲ್ಲೂ 150-200 ಬೆಡ್ ಗಳಿವೆ. ವೈರಸ್ ಎದುರಿಸಲು ರಾಜ್ಯದಲ್ಲಿ ಇನ್ನೂ 17 ಆಸ್ಪತ್ರೆಗಳಿವೆ. ಇವುಗಳಲ್ಲಿ 7 ಆಸ್ಪತ್ರೆಗಳು ಬೆಂಗಳೂರಿನಲ್ಲಿಯೇ ಇದೆ.
ಸರ್ಕಾರ ಶಾಸಕರ ಶೇ.30ರಷ್ಟು ವೇತನ ಕಡಿತಗೊಳಿಸಲು ನಿರ್ಧರಿಸಿದೆ. ರಾಜ್ಯ ಸರ್ಕಾರದ ನೌಕರರ ವೇತನವನ್ನೂ ಕಡಿತಗೊಳಿಸುವ ಯೋಜನೆಗಳಿವೆಯೇ?
ಪ್ರಸ್ತುತ ಪರಿಸ್ಥಿತಿಯಲ್ಲಂತೂ ಸರ್ಕಾರಿ ನೌಕರರ ವೇತನವನ್ನು ಮುಟ್ಟುವುದಿಲ್ಲ. ಮುಂದಿನ ದಿನಗಳಲ್ಲಿ ಕಾದು ನೋಡೋಣ.
ಚಿಕಿತ್ಸೆಯ ವಿಚಾರಕ್ಕೆ ಬಂದರೆ, ರಾಜ್ಯ ಸರ್ಕಾರ ಪ್ಲಾಸ್ಮಾ ಇನ್ಫ್ಯೂಷನ್ ತಂತ್ರಜ್ಞಾನಕ್ಕೆ ಒಪ್ಪಿದೆ ನೀಡಿದೆ. ಈಗಾಗಲೇ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಕೇಂದ್ರ ಸರ್ಕಾರ ಅನುಮೋದನೆಗಾಗಿ ಕಾಯುತ್ತಿದೆ. ಇದಲ್ಲದೆ, ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮಾಡಲು ಭಾರತ ನಿರ್ಧರಿಸಿದೆ. ಹೆಚ್'ಸಿಕ್ಯೂ ರಫ್ತಿಗೆ ಅವಕಾಶ ನೀಡುವುದು ಸಮಸ್ಯೆಯಾಗಲಿದೆಯೇ ಎಂದು ನೀವು ಭಾವಿಸುವಿರಾ? ನಮ್ಮಲ್ಲಿ ಸಾಕಷ್ಟು ದಾಸ್ತಾನು ಇದೆಯೇ?
ನಮ್ಮಲ್ಲಿ ಸಾಕಷ್ಟು ದಾಸ್ತಾನುಗಲಿವೆ. ಯಾವುದೇ ಸಮಸ್ಯೆಯಿಲ್ಲ.
ಚಿಕಿತ್ಸೆ ವಿಚಾರಕ್ಕೆ ಬಂದರೆ, ನಿಮಗೆ ಬಂದಿರುವ ವರದಿಗಳೇನು? ಹೆಚ್'ಸಿಕ್ಯೂ ಕೆಲಸ ಮಾಡುತ್ತಿದೆಯೇ?
ಇತರೆ ಚಿಕಿತ್ಸೆಗಳಿಗೆ ಹೋಲಿಕೆ ಮಾಡಿದರೆ, ಹೆಚ್'ಸಿಕ್ಯೂ ಕೆಲಸ ಮಾಡುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೆ, ಆ ಮಟ್ಟಕ್ಕೆ ಕರ್ನಾಟಕ ಇನ್ನೂ ಬಂದಿಲ್ಲ.
ಐಟಿ-ಬಿಟಿ ಕ್ಷೇತ್ರಕ್ಕೆ ಕರ್ನಾಟಕ ತವರಾಗಿದ್ದು, ತಜ್ಞರ ಸಮಿತಿ ಸೂಚಿಸಿದಂತೆ ಆ ಕ್ಷೇತ್ರಗಳ ತೆರೆಯಲು ನೀವು ಒಪ್ಪಿಗೆ ನೀಡುವಿರಾ?
ಆ ನಿಟ್ಟಿನಲ್ಲೂ ನಾವು ಚಿಂತನೆ ನಡೆಸುತ್ತಿದ್ದೇವೆ. ನಮ್ಮ ಗಮನಕ್ಕೆ ಬಂದಿರುವ ಪ್ರಕಾರ ಐಟಿ-ಬಿಟಿ ಉದ್ಯಮಿಗಲು ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಶೇ.50 ರಷ್ಟು ಜನರು ಮಾತ್ರ ಕಚೇರಿಯಲ್ಲಿ ಕೆಲಸ ಮಾಡಬಹುದಾಗಿದೆ. ಆದರೆ, ಈ ಕುರಿತು ಏಪ್ರಿಲ್ 14ರ ಬಳಿಕ ನಿರ್ಧಾರ ಕೈಗೊಳ್ಳಲಿದ್ದೇವೆ.
Advertisement