ಬೆಂಗಳೂರು: ಕೊರೋನಾವೈರಸ್ ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿರುವ ಮುಸ್ಲಿಂ ಸಮುದಾಯದ ಮೌಲಿಗಳು, ನಾಯಕರು ಹಾಗೂ ಜನಪ್ರತಿನಿಧಿಗಳು ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರು ಸ್ವಯಂ ಪ್ರೇರಣೆಯಿಂದ ಮುಂದೆ ಬರುವಂತೆ ಮನವಿ ಮಾಡುತ್ತಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಜಾಮಾ ಮಸೀದಿ ಮೌಲಾನಾ ಮೊಹಮ್ಮದ್ ಮಕ್ಸೂದ್ ಇಮ್ರಾನ್ ರಶೀದಿ, ಅರಿವು ಮೂಡಿಸುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಬಳಸುತ್ತಿರುವುದಾಗಿ ತಿಳಿಸಿದರು.
ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರು ಸಮೀಪದ ಪೊಲೀಸ್ ಠಾಣೆ ಅಥವಾ ಆಸ್ಪತ್ರೆಗೆ ಮಾಹಿತಿ ನೀಡಿ, ಅಗತ್ಯವಿದ್ದರೆ ಕ್ವಾರೆಂಟೈನ್ ಜನರಿಗಾಗಿ ಹಜ್ ಮನೆಯ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ವಾಟ್ಸಾಪ್ ಮತ್ತು ಫೇಸ್ ಬುಕ್ ಗಳಲ್ಲಿ ಸಂದೇಶ ಕಳುಹಿಸಲಾಗುತ್ತಿದೆ, ಮಸೀದಿಗಳ ಧ್ವನಿವರ್ದಕಗಳಲ್ಲಿಯೂ ಸಂದೇಶ ಪ್ರಕಟಿಸಲಾಗುತ್ತಿದೆ. ಮಾಜಿ ಸಚಿವ ಯು ಟಿ ಖಾದರ್ ಕೂಡಾ ಇದೇ ರೀತಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಜನರು ತಪಾಸಣೆ ಮಾಡಿಸಿಕೊಳ್ಳುವಂತೆ ರಾಜ್ಯ ಮುಸ್ಲಿಂ ಮುತ್ತಾಹಿದಾ ಮಹಾಜ್ ಸಂಘಟಕ ಮಸೂದ್ ಅಬ್ದುಲ್ ಖಾದರ್ ಮನವಿ ಮಾಡಿಕೊಂಡಿದ್ದಾರೆ.
ಇದು ಕೇವಲ ನೈತಿಕ ಜವಾಬ್ದಾರಿ ಅಥವಾ ಧಾರ್ಮಿಕ ಜವಾಬ್ದಾರಿಯಲ್ಲ, ರಾಷ್ಟ್ರೀಯ ಜವಾಬ್ದಾರಿಯಾಗಿದೆ. ಸ್ಥಳೀಯ ನಾಯಕರ ಮೂಲಕ ಜನರನ್ನು ಮನವೊಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಅಜಾನ್ ಸಂದರ್ಭದಲ್ಲಿ ಸಂದೇಶ ಕಳುಹಿಸಲಾಗುತ್ತಿದೆ ಇದರಿಂದ ಅನಕ್ಷರಸ್ಥರು ಅರ್ಥ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ಜಮಾತ್ -ಇ- ಇಸ್ಲಾಮಿ ಹಿಂದ್ ಕರ್ನಾಟಕ ಅಧ್ಯಕ್ಷ ಡಾ. ಬೆಲ್ಗಾಮಿ ಮೊಹಮ್ಮದ್ ಸಾದ್ ತಿಳಿಸಿದ್ದಾರೆ.
Advertisement